ಮಂಗಳೂರು: ‘ರಾಜ್ಯದಲ್ಲಿ ಅತ್ಯಂತ ಕೆಟ್ಟದಾಗಿ ಇಂಧನ ಖಾತೆ ನಿರ್ವಹಿಸಿದ ಕೀರ್ತಿ ಹಿಂದಿನ ಕಾಂಗ್ರೆಸ್ ಸರ್ಕಾರದ್ದು. ಈ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು ಆಗಿನ ಇಂಧನ ಸಚಿವರು ಅದೇ ಖಾತೆಗೆ ಪಟ್ಟು ಹಿಡಿದಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗಿಂತ ಹಿಂದೆ ಇಂಧನ ಸಚಿವರಾಗಿದ್ದವರು ಹೇಗೆ ಆ ಖಾತೆ ನಿರ್ವಹಿಸಿದ್ದರು ಎಂಬುದು ನನಗೆ ಗೊತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂಧನ ಖಾತೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ’ ಎಂದರು.
ಹೊಸಬರು ಇಂಧನ ಖಾತೆ ಸಚಿವರಾದರೆ ಅಕ್ರಮಗಳನ್ನು ಪತ್ತೆ ಮಾಡಬಹುದು ಎಂಬ ಭಯ ಹಿಂದಿನ ಸಚಿವರಿಗೆ ಇದೆ. ಈ ಕಾರಣಕ್ಕಾಗಿಯೇ ಇಂಧನ ಖಾತೆಗೆ ಪಟ್ಟು ಹಿಡಿದಿದ್ದಾರೆ. ಇಂಧನ ಖಾತೆಯಲ್ಲಿ ’ಪವರ್’ ಮತ್ತು ‘ಶಾಕ್’ ಎರಡೂ ಇದೆ ಎಂದು ಟೀಕಿಸಿದರು.