ಕುಷ್ಟಗಿ: ಬೀಜೋಪಚಾರ ಇಳುವರಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಬಿತ್ತನೆ ಸಮಯದಲ್ಲಿ ರೈತರು ಕೃಷಿ ತಜ್ಞರ ಸಲಹೆ ಪಡೆಯುವ ಅಗತ್ಯವಿದೆ ಎಂದು ಕೃಷಿ ವಿಜ್ಞಾನಿ ಡಾ.ಎಂ.ಬಿ.ಪಾಟೀಲ ಹೇಳಿದರು.
ಕೃಷಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ಸೋಮವಾರ ‘ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ’ ಘೋಷವಾಕ್ಯದೊಂದಿಗೆ ನಡೆದ ಕೃಷಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೂರ್ಣಪ್ರಮಾಣದಲ್ಲಿ ತೇವಾಂಶ ಇದ್ದಾಗ ಬಿತ್ತನೆ ನಡೆಸಬೇಕು. ಅದಕ್ಕೂ ಮೊದಲು ಬೀಜೋಪಚಾರ ನಡೆಸಿದರೆ ಶೇ 20ರಷ್ಟು ಇಳುವರಿ ಹೆಚ್ಚಾಗುತ್ತದೆ. ಕೃಷಿ ಇಲಾಖೆ ವಿತರಿಸುವ ಸಾಮಗ್ರಿಗಳು ಮತ್ತು ಜೈವಿಕ ಕ್ರಿಮಿನಾಶಕಗಳನ್ನು ವೈಜ್ಞಾನಿಕ ರೀತಿಯಲ್ಲಿ ಬಳಕೆ ಮಾಡಿದರೆ ಮಣ್ಣಿನ ಫಲವತ್ತತೆ ಉಳಿಸುವುದರ ಜೊತೆಗೆ ಉತ್ತಮ ಇಳುವರಿ ಪಡೆಯಲೂ ಸಾಧ್ಯ ಎಂದರು.
ಹಿಂದೆ ನಮ್ಮ ರೈತರು ಆಯಾ ದಿನಗಳಲ್ಲಿ ಬೀಳುವ ಮಳೆ, ಕೀಟಗಳ ಹಾವಳಿ ಹೆಚ್ಚಿರುವ ಸಮಯ, ಹವಾಮಾನ ಪದ್ಧತಿಗೆ ಅನುಗುಣವಾಗಿ ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಕೀಟಗಳ ಕಾಟ ಹೆಚ್ಚಾಗುತ್ತಿದೆ. ಇವೆಲ್ಲವುಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದಕ್ಕೆ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಸ್ತೀರ್ಣ ಕೇಂದ್ರದ ಮೂಲಕ ರೈತರಿಗೆ ಸಲಹೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಣ್ಣ ಕಮತರ ಮಾತನಾಡಿ, ಮುಂಗಾರು ಹಂಗಾಮಿಗೆ ಬಿತ್ತನೆಗೆ ಬೇಕಾಗುವ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನು ತಾಲ್ಲೂಕಿನ ಎಲ್ಲ ಹೋಬಳಿಗಳ ಕೃಷಿ ಸಂಪರ್ಕ ಕೇಂದ್ರಗಳಲ್ಲ ಲಭ್ಯವಿದೆ. ಅಲ್ಲದೇ ಅಗತ್ಯ ಕೃಷಿ ಪೀಠೋಪಕರಗಳು ಹಾಗೂ ಬಿತ್ತನೆ ಸಂದರ್ಭದಲ್ಲಿ ಅಗತ್ಯ ಬೀಜೋಪಚಾರಕ್ಕೆ ಬೇಕಾಗುವ ಕ್ರಿಮಿನಾಶಕ ಸಾಮಾಗ್ರಿಗಳು ಲಭ್ಯ ಇವೆ ಎಂದರು.
ಸಿಬ್ಬಂದಿ ಕೊರತೆ ಎದುರಾಗಿರುವು ದರಿಂದ ಪ್ರತಿ ರೈತರ ಜಮೀನಿಗೆ ಭೇಟಿ ನೀಡಲ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಎರಡು ದಿನಗಳ ಅವಧಿಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ತೆರಳಿ ಮಾಹಿತಿ ನೀಡಲು ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೃಷಿ ಸಹಾಯಕ ಅಧಿಕಾರಿಗಳಾದ ಬಾಲಪ್ಪ ಜಲಗೇರಿ, ರಾಘವೇಂದ್ರ ಕೊಂಡಗುರಿ, ಶೇಖರಯ್ಯ ಹಿರೇಮಠ, ಪ್ರಕಾಶ ತಾರಿವಾಳ ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.