ಶಹಾಪುರ: ನಗರದ ಹೃದಯ ಭಾಗದಲ್ಲಿರುವ ತರಕಾರಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಚರಂಡಿಯ ಮೇಲೆಯೇ ತರಕಾರಿ ಹಾಗೂ ಸಿಹಿ ತಿಂಡಿ ಪದಾರ್ಥಗಳ ಮಾರಾಟ ಮಾಡಲಾಗುತ್ತಿದ್ದು, ಇದು ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ.
ಐದು ವರ್ಷಗಳ ಹಿಂದೆ ಮಾರುಕಟ್ಟೆಯ ಪ್ರಾಂಗಣವನ್ನು ಅಭಿವೃದ್ಧಿ ಪಡಿಸಿ, ವ್ಯಾಪಾರಿಗಳು ಕಟ್ಟೆಯ ಮೇಲೆ ಕುಳಿತು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಹಾಗೂ ಸ್ಥಳೀಯ ರಾಜಕೀಯ ಮುಖಂಡರ ಹಸ್ತಕ್ಷೇಪದಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ.
ತರಕಾರಿ ಮಾರಾಟಗಾರರು ಚರಂಡಿ ಬಳಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ ದುರ್ವಾಸನೆಯಲ್ಲಿಯೇ ಜನರು ತರಕಾರಿ ಖರೀದಿಸುತ್ತಾರೆ. ಅಲ್ಲದೇ ಇಲ್ಲಿ ಹಂದಿ ಹಾಗೂ ಬಿಡಾಡಿ ದನಗಳ ಹಾವಳಿ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೊಲಂಪಲ್ಲಿ.
ಸಂಜೆ ವೇಳೆ ಉಳಿದ ಕಾಯಿಪಲ್ಯ ಹಾಗೂ ತ್ಯಾಜ್ಯ ವಸ್ತುವನ್ನು ಮಾರಾಟ ಗಾರರು ಚರಂಡಿಯಲ್ಲಿ ಎಸೆಯುತ್ತಾರೆ ಇದು ಕೊಳೆತು ಮತ್ತೊಷ್ಟು ಕೆಟ್ಟ ವಾಸನೆ ಉಂಟು ಮಾಡುತ್ತದೆ.
ನಗರಸಭೆಯ ಸಿಬ್ಬಂದಿಯು ನೆನಪಾದಗೊಮ್ಮೆ ಚರಂಡಿ ಸ್ವಚ್ಛಗೊಳಿಸುತ್ತಾರೆ. ಇಲ್ಲಿನ ತರಕಾರಿ ಖರೀದಿಸಲು ಭಯವಾಗುತ್ತದೆ. ಕೂಡಲೇ ಮಾರುಕಟ್ಟೆಯನ್ನು ಎಪಿಎಂಸಿ ಜಾಗಕ್ಕೆ ಸ್ಥಳಾಂತರಿಸಬೇಕು ಎಂದು ನಗರದ ನಿವಾಸಿ ಮಾನಪ್ಪ ಹಡಪದ ಒತ್ತಾಯಿಸಿದರು.
ಸಾಂಕ್ರಾಮಿಕ ರೋಗ ಭೀತಿ: ಮಳೆಗಾಲ ಶುರವಾಗಿದ್ದು, ರಸ್ತೆಯ ಮೇಲೆ ಚರಂಡಿಯ ತ್ಯಾಜ್ಯದ ನೀರು ಹರಿಯುತ್ತದೆ. ಕೂಡಲೇ ಚರಂಡಿ, ಹಳ್ಳ ಸ್ವಚ್ಛತೆ ಮಾಡುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ನಿರ್ಲಕ್ಷಿಸಿದ್ದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಆರೋಗ್ಯ ಇಲಾಖೆಯಿಂದ ಮಲೇರಿಯಾ ಮಾಸಾಚರಣೆ
ಆಚರಿಸುವ ಜತೆಯಲ್ಲಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದರು.
ಅಲ್ಲದೆ ಹಲವು ಭಾಗದಲ್ಲಿ ಜನರು ಇಂದಿಗೂ ಬಯಲು ಶೌಚಾಲಯಕ್ಕೆ ತೆರಳುತ್ತಿದ್ದಾರೆ. ಮಲ ಮೂತ್ರ ಚರಂಡಿಯಲ್ಲಿ ಸೇರಿ, ಒಡೆದ ನೀರಿನ ಪೈಪ್ಗಳ ಮೂಲಕ ಪುನಃ ಜನರಿಗೆ ಪೂರೈಕೆಯಾಗುತ್ತಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ವಚ್ಛತೆ ಕ್ರಮದ ಬಗ್ಗೆ ಈಗಾಗಲೇ ತಾಲ್ಲೂಕಿನ 41 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ನಗರಸಭೆಯ ಪೌರಾಯುಕ್ತರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದರು.
ಜೂನ್ನಲ್ಲಿ ಸಾಮಾನ್ಯವಾಗಿ ಮಲೇರಿಯಾ ಕಾಣಿಸಿಕೊಂಡು, ವಾಂತಿಭೇದಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜನರು ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು
– ಡಾ.ರಮೇಶ ಗುತ್ತೇದಾರ, ತಾಲ್ಲೂಕು ವೈದ್ಯಾಧಿಕಾರಿ
ಟಿ.ನಾಗೇಂದ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.