ಬೆಂಗಳೂರು: ಭ್ರಷ್ಟಾಚಾರ ಮಾಡುವುದಿಲ್ಲ, ತಾವು 24 ಕ್ಯಾರೆಟ್ ಅಪರಂಜಿ ಎಂದು ರಾಜಕೀಯದಲ್ಲಿ ಯಾರೊಬ್ಬರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಆ ರೀತಿ ಹೇಳಿದರೆ ಅದು ಆತ್ಮವಂಚನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ಗಾಂಧಿ ಭವನದಲ್ಲಿ ಸೋಮವಾರ ಮಾತನಾಡುವಾಗ, ‘ಭ್ರಷ್ಟಾಚಾರದ ನಿರ್ಮೂಲನೆ ಕಷ್ಟ. ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ’ ಎಂಬುದಾಗಿ ನೀಡಿರುವ ಹೇಳಿಕೆಯ ಬಗ್ಗೆ ಅವರ ಗಮನ ಸೆಳೆದಾಗ ಮೇಲಿನಂತೆ ತಿಳಿಸಿದರು.
‘ಭ್ರಷ್ಟಾಚಾರ ಎಲ್ಲ ಹಂತಗಳಲ್ಲೂ ಇದೆ. ಯಾರಾದರೂ ತಾವು ಭ್ರಷ್ಟಾಚಾರ ಮುಕ್ತ ಎಂದು ಹೇಳಿಕೊಂಡರೆ, ಅದು ಆತ್ಮವಂಚನೆಯಾಗುತ್ತದೆ’ ಎಂದರು.
‘ನಾವು ನಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದರೆ, ಅದು ನಾವು ಜನರಿಗೆ ಕೊಡುವ ಕಾಣಿಕೆಯಾಗುತ್ತದೆ. ಬೇರೊಬ್ಬರ ಬಗ್ಗೆ ನಾನು ಏನೂ ಹೇಳುವುದಿಲ್ಲ. ವೈಯಕ್ತಿಕವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಬಗ್ಗೆ ಪ್ರಯತ್ನ ನಡೆಸುತ್ತೇನೆ’ ಎಂದು ಕೃಷ್ಣ ಭೈರೇಗೌಡ ಹೇಳಿದರು.