ಗೌರಿಬಿದನೂರು: ಜನರ ಒತ್ತಾಯದ ಮೇರೆಗೆ ಸಾರ್ವಜನಿಕ ಆಸ್ಪತ್ರೆಯನ್ನು ಪಟ್ಟಣದಲ್ಲಿಯೇ ಉಳಿಸಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರವಿಶಂಕರ್ ತಿಳಿಸಿದರು.
ಪಟ್ಟಣದ ಮಧ್ಯದಲ್ಲಿದ್ದ ಸಾರ್ವಜನಿಕ ಆಸ್ಪತ್ರೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಿದ್ದನ್ನು ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆ ಪ್ರಯುಕ್ತ ಚರ್ಚೆ ನಡೆಸಲು ಮಂಗಳವಾರ ಕರೆದಿದ್ದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಪಟ್ಟಣದ ಒಳಗಿರುವ ಸಾರ್ವಜನಿಕ ಅಸ್ಪತ್ರೆ ಕಟ್ಟಡ ಬಹುತೇಕ ಶಿಥಿಲವಾಗಿದೆ. ಮಳೆಗಾಲದಲ್ಲಿ ಸೋರುವುದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆ ಆಗುತ್ತದೆ. ಅಲ್ಲದೆ ಸಿಬ್ಬಂದಿ ಕೊರತೆ ಕಾರಣ ಸಾರ್ವಜನಿಕ ಆಸ್ಪತ್ರೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ವಿರೋಧದ ಕಾರಣ ಹಳೆ ವ್ಯವಸ್ಥೆ ಮುಂದುವರಿಯಲಿದೆ ಎಂದರು.
ಇದಕ್ಕೂ ಮುನ್ನಡ ಮಾತನಾಡಿದ ಸಿಪಿಎಂ ಮುಖಂಡ ಸಿದ್ದಗಂಗಪ್ಪ, ಆಸ್ಪತ್ರೆಗೆ ಸಂಬಂಧಿಸಿದಂತೆ ಸಮಸ್ಯೆಗಳಿ ದ್ದರೆ ಮೇಲಧಿಕಾರಿ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.
ಕರವೇ ಸಂಘಟನೆಯ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, 'ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಕಟ್ಟಿದ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ಅವೈಜ್ಞಾನಿಕ ಎಂದು ಆರೋಪಿಸಿದರು.
ವೈದ್ಯಾಧಿಕಾರಿ ಡಾ. ಒ.ರತ್ನಮ್ಮ, ಡಾ. ಶಾಂತಲಾ, ಮುಖಂಡರಾದ ಪ್ರದೀಪ್, ಶೋಭಾ, ಮುರಳಿ, ನಟರಾಜ, ನಾಗ ರಾಜು, ಮೂರ್ತಿ ಭಾಗವಹಿಸಿದ್ದರು.