ಚೆನ್ನೈ: ‘ಬಿಜೆಪಿಯ ಕೋಮುವಾದಿ ರಾಜಕೀಯ, ದ್ವೇಷ ಪ್ರೇರಿತ ನೀತಿಗಳಿಂದ ಮಣಿಪುರ ಮತ್ತು ಹರಿಯಾಣದ ಸ್ಥಿತಿ ಬಿಗಡಾಯಿಸಿದೆ. ಭಾರತದ ಸ್ಥಿತಿಯೂ ಹೀಗಾಗದಂತೆ ತಡೆಯಲು 2024ರ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು ಜಯಗಳಿಸಬೇಕಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಪಾದಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿರುವ ಪಾಡ್ಕಾಸ್ಟ್ನ ಮೊದಲ ಸರಣಿಯಲ್ಲಿ ಅವರು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರವು ತನ್ನ ನ್ಯೂನತೆಗಳನ್ನು ಮರೆಮಾಚಲು ಧರ್ಮವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಜನರ ನಡುವೆ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ. ಈ ಕೋಮು ಜ್ವಾಲೆಯಲ್ಲಿ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳುತ್ತಿದೆ ಎಂದು ದೂರಿದರು.
ವಿವಿಧತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯ. ಪ್ರತಿ ಧರ್ಮವೂ ಪ್ರತ್ಯೇಕವಾದ ಉದಾತ್ತ ಭಾವನೆ ಹೊಂದಿದೆ. ಹಾಗಾಗಿ ಯಾರೊಬ್ಬರೂ ಜನರ ಭಾವನೆಗಳಿಗೆ ಚ್ಯುತಿ ತರಬಾರದು-ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ ಪಶ್ಚಿಮ ಬಂಗಾಳ
‘2014ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದೆ. ಜನರ ಮನದಲ್ಲಿ ದ್ವೇಷದ ವಿಷಬೀಜಗಳನ್ನು ಬಿತ್ತುತ್ತಿದೆ. ಜಿಎಸ್ಟಿ ಮೂಲಕ ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ಕಸಿದುಕೊಂಡಿದೆ. ಹಣಕಾಸು ಆಯೋಗದ ಮೂಲಕ ಆರ್ಥಿಕ ನೆರವಿನ ಹಂಚಿಕೆಯನ್ನೂ ಕಡಿಮೆಗೊಳಿಸಿದೆ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.