ನವದೆಹಲಿ: ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸುಮಾರು 50 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಸಾಂಕ್ರಾಮಿಕ ರೋಗ ಪ್ರಾರಂಭದಿಂದ ಜೂನ್ 2021ರವರೆಗೆ ಮೂರು ವಿಭಿನ್ನ ದತ್ತಾಂಶ ಮೂಲಗಳಿಂದ ಹೆಚ್ಚುವರಿ ಮರಣ ಪ್ರಮಾಣವನ್ನು ಅಂದಾಜು ಮಾಡಿರುವ ಜಾಗತಿಕ ಅಭಿವೃದ್ಧಿ ಕೇಂದ್ರದ ಹೊಸ ಅಧ್ಯಯನವನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ನಮ್ಮ ಸಹೋದರ, ಸಹೋದರಿಯರು, ತಂದೆ, ತಾಯಿಯರು ಸೇರಿದಂತೆ 50 ಲಕ್ಷ ಜನರನ್ನು ಕಳೆದುಕೊಂಡಿದ್ದೇವೆ’ ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ದೇಶದಲ್ಲಿ ಇಲ್ಲಿಯವರೆಗೆ ಸುಮಾರು 4.18 ಲಕ್ಷ ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತವೆ.