ಚೆನ್ನೈ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪಕ್ಕಾಗಿ ತೂತ್ತುಕುಡಿ ಜಿಲ್ಲಾ ಘಟಕದ 144 ಮಂದಿಯನ್ನು ಎಐಎಡಿಎಂಕೆ ಶನಿವಾರ ಉಚ್ಛಾಟಿಸಿದೆ.
ಎಐಎಡಿಎಂಕೆ ಸಂಚಾಲಕ ಹಾಗೂ ಉಪಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ ಮತ್ತು ಸಹಸಂಚಾಲಕ ಮತ್ತು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ನೀಡಿರುವ ಜಂಟಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ಅಗೌರವ ತೋರಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಉಚ್ಚಾಟನೆ ಮಾಡಿರುವ ವ್ಯಕ್ತಿಗಳ ಜತೆ ಸಂಪರ್ಕಇಟ್ಟುಕೊಳ್ಳಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಈ ಇಬ್ಬರೂ ನಾಯಕರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 21ರಂದು ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಬಂಡಾಯ ನಾಯಕ
ಟಿ.ಟಿ.ವಿ.ದಿನಕರನ್ ಜಯ ಗಳಿಸಿದ್ದರು. ಬಳಿಕ ದಿನಕರನ್ ಅವರ ಒಂಬತ್ತು ಆಪ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.