ಗುರುಗ್ರಾಮ: ಆಧಾರ್ ಕಾರ್ಡ್ ಇಲ್ಲದ ಕಾರಣ ಹೆರಿಗೆ ವಾರ್ಡ್ನಲ್ಲಿ ಪ್ರವೇಶ ನಿರಾಕರಿಸಿದ್ದರಿಂದ ಗರ್ಭಿಣಿಯೊಬ್ಬಳು ವಾರ್ಡ್ ಹೊರಗಡೆ ಜನರು ಓಡಾಡುವ ಜಾಗದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಅಮಾನಷು ಘಟನೆ ಗುರುಗ್ರಾಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ. ಕರ್ತವ್ಯ ಲೋಪಕ್ಕಾಗಿ ಆಸ್ಪತ್ರೆಯ ಸಿಬ್ಬಂದಿ ಬೆಲೆಯನ್ನೂ ತೆತ್ತಿದ್ದಾರೆ. ವೈದ್ಯ ಮತ್ತು ಶುಶ್ರೂಷಕಿಯನ್ನುಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
ಹೆರಿಗೆ ನೋವು ಕಾಣಿಸಿಕೊಂಡ ಮುನ್ನಿ ಕೆವಾತ್ ಎಂಬ 25 ವರ್ಷದ ಗರ್ಭಿಣಿಯನ್ನು ಆಕೆಯ ಪತಿ ಶನಿವಾರ ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾನೆ. ಆದರೆ, ಆಕೆಯನ್ನು ಹೆರಿಗೆ ವಾರ್ಡ್ಗೆ ಸೇರಿಸಲು ಆಸ್ಪತ್ರೆಯ ಸಿಬ್ಬಂದಿ ಆಧಾರ್ ಕಾರ್ಡ್ ಕೇಳಿದರು.
‘ಗಡಿಬಿಡಿಯಲ್ಲಿ ಆಧಾರ್ ಕಾರ್ಡ್ ತರುವುದನ್ನು ಮರೆತಿದ್ದೇನೆ. ಸದ್ಯಕ್ಕೆ ಆಧಾರ್ ಸಂಖ್ಯೆ ನೀಡುವೆ. ನಂತರ ಕಾರ್ಡ್ ನೀಡುವೆ ಎಂದು ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ಪ್ರವೇಶ ನೀಡಲು ನಿರಾಕರಿಸಿದರು’ ಎಂದು ಗರ್ಭಿಣಿಯ ಪತಿ ಅರುಣ್ ಕೆವಾತ್ ಆರೋಪಿಸಿದ್ದಾರೆ.
ಪರಿಪರಿಯಾಗಿ ಬೇಡಿಕೊಂಡರೂ ಕರಗದ ಅಲ್ಲಿದ್ದ ವೈದ್ಯೆ ಮತ್ತು ಶುಶ್ರೂಷಕಿ, ಆಧಾರ್ ಕಾರ್ಡ್ ತಂದರೆ ಮಾತ್ರ ಹೆರಿಗೆ ವಾರ್ಡ್ನಲ್ಲಿ ಪ್ರವೇಶ ನೀಡುವುದಾಗಿ ಕಡ್ಡಿಮುರಿದಂತೆ ಹೇಳಿದರು. ಅನಿವಾರ್ಯವಾಗಿ ಸಂಬಂಧಿಗಳನ್ನು ಹೆಂಡತಿ ಬಳಿ ಬಿಟ್ಟು ಕಾರ್ಡ್ ತರಲು ಹೋಗಿದ್ದೆ.
ಆಗ ಹೆರಿಗೆ ನೋವು ತೀವ್ರವಾದ ಕಾರಣ ಸಂಬಂಧಿಗಳು ಬೇರೆ ವಾರ್ಡ್ಗೆ ಕರೆದೊಯ್ದಿದ್ದಾರೆ. ಅಲ್ಲಿಂದಲೂ ನಿರ್ದಯವಾಗಿ ಹೊರ ಹಾಕಿದ್ದಾರೆ. ತುರ್ತುನಿಗಾ ಘಟಕದ ಬಾಗಿಲ ಬಳಿ ನೆಲದಲ್ಲಿ ತನ್ನ ಪತ್ನಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಆತ ತಿಳಿಸಿದ್ದಾನೆ.