ನವದೆಹಲಿ: 72ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣನೆರವೇರಿಸಿದರು.
ಬಿಳಿಯ ಕುರ್ತ ಪೈಜಾಮ ತೊಟ್ಟಿರುವಪ್ರಧಾನಿ ಮೋದಿ, ಕೇಸರಿ ಬಣ್ಣದ ಇಳಿಬಿಟ್ಟ ಪೇಟ ಧರಿಸಿದ್ದಾರೆ.ಧ್ವಜಾರೋಹಣದ ಬಳಿಕ ಪ್ರಧಾನಿ ಮೋದಿ ಮುಂದೆ ನಿಂತು ಜನರತ್ತ ಕೈಬೀಸಿದರು. 2019ರ ಲೋಕಸಭಾ ಚುನಾವಣೆಗೂ ಮುನ್ನ 72ನೇ ಸ್ವಾತಂತ್ರ್ಯ ದಿನ, ಪ್ರಧಾನಿಯಾಗಿಮೋದಿ ಅವರಕೊನೆಯ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದರು.
ತಮಿಳು ಕವಿ ಸುಬ್ರಮಣ್ಯ ಭಾರತಿಯಾರ್ ಅವರ ಸಾಲುಗಳನ್ನು ಪ್ರಧಾನಿ ತಮಿಳಿನಲ್ಲಿಯೇ ವಾಚಿಸಿದರು. ’ಭಾರತ ಭವ್ಯ ರಾಷ್ಟ್ರವಾಗಿ ಉದಯಿಸುವ ಜತೆಗೆ ಇತರರಿಗೂ ಸ್ಫೂರ್ತಿ ನೀಡಲಿದೆ ಎಂದು ಭಾರತಿಯಾರ್ ಬರೆದಿದ್ದಾರೆ. ಎಲ್ಲ ರೀತಿಯ ಸಂಕೋಲೆಗಳಿಂದ ಬಿಡಿಸಿ ಬರುವುದನ್ನು ಭಾರತ ಇಡೀ ಜಗತ್ತಿಗೆ ತೋರಲಿದೆ’ ಎಂದರು.
ಪ್ರಧಾನಿ ಮೋದಿ ಮಾತು
ಮೇರೆ ಪ್ಯಾರೆ ದೇಶ್ ವಾಸಿಯೋ, ಎಲ್ಲರಿಗೂ 72ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು.
ಭಾರತೀಯ ಮಹಿಳೆಗೆ ನನ್ನ ನಮನಗಳು. ನಮ್ಮ ಹೆಣ್ಣು ಮಕ್ಕಳು ಸಪ್ತ ಸಾಗರವನ್ನು ದಾಟಿ, ಇಡೀ ಜಗತ್ತನ್ನು ತ್ರಿವರ್ಣಮಯ ಮಾಡಿದ್ದಾರೆ.ರಾಷ್ಟ್ರಧ್ವಜವನ್ನು ಮೌಂಟ್ ಎವರೆಸ್ಟ್ ಪರ್ವತದ ಮೇಲೆ ಹಾರಿಸಿದ ಬುಡಕಟ್ಟಿನ ಮಕ್ಕಳು ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅವರಿಗೆ ನನ್ನ ನಮನಗಳು.
ದೇಶ ಆತ್ಮವಿಶ್ವಾಸ, ಹೊಸ ವಿಶ್ವಾಸ ಕನಸು ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ.
ಮುಂಗಾರು ಅಧಿವೇಶ: ಇತ್ತೀಚೆಗೆ ಮುಕ್ತಾಯವಾದ ಸಂಸತ್ತಿನ ಮುಂಗಾರು ಅಧಿವೇಶವನ್ನು ಸಾಮಾಜಿಕ ನ್ಯಾಯಕ್ಕಾಗಿ ಮೀಸಲಿಡಲಾಗಿತ್ತು. ಒಬಿಸಿ ಆಯೋಗ ರಚನೆಗಾಗಿ ಅಧಿವೇಶನದಲ್ಲಿ ಮಸೂದೆ ಅನುಮೋದನೆ ಪಡೆಯಿತು.ಮುಂಗಾರು ಮಳೆ ದೇಶದ ಹಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಿಸಿದೆ. ಉತ್ತಮ ಮಳೆಯ ಜತೆಗೆ ಪ್ರವಾಹದಿಂದ ತೊಂದರೆ ಉಂಟಾಗಿದೆ. ಪ್ರವಾಹದಲ್ಲಿ ಸಾವಿಗೀಡಾದ ಜನರ ಕುಟುಂಬಕ್ಕೆ ನನ್ನ ಸಂತಾಪ.
ಭಾರತೀಯ ಸಂವಿಧಾನ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸರ್ವರಿಗೂ ನ್ಯಾಯ ಸಿಗುವ ಕುರಿತು ಹೇಳಿದ್ದಾರೆ. ನಾವು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ನಿರಂತರವಾಗಿ ಉನ್ನತಿ ಕಾಣುವ ಭಾರತವನ್ನು ಸೃಷ್ಟಿಸಬೇಕು. ಬಡವರಿಗೂ ನ್ಯಾಯ ಸಿಗುತ್ತದೆ. ತಮ್ಮ ಇಚ್ಛೆಯ ಅನುಸಾರ ಪ್ರತಿಯೊಬ್ಬರಿಗೂ ಮುಂದೆ ಸಾಗಲು ಅವಕಾಶವಿದೆ.
ಯುಪಿಎ ಸರ್ಕಾರ: 2013ರಲ್ಲಿ ಸಾಗುತ್ತಿದ್ದ ವೇಗದಲ್ಲಿಯೇ ಶೌಚಾಲಯಗಳ ನಿರ್ಮಾಣ, ವಿದ್ಯುತ್ ಸಂಪರ್ಕ ಕಾರ್ಯಗಳು ನಡೆದಿದ್ದರೆ, ಆ ಯೋಜನೆಗಳನ್ನು ಪೂರ್ಣಗೊಳಿಸಲು ದಶಕಗಳೇ ಕಳೆಯುತ್ತಿದ್ದವು.
ಎನ್ಡಿಎ ಸಾಧನೆಗಳು: ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಧನೆಗಳನ್ನು ಪ್ರಧಾನಿ ತೆರೆದಿಟ್ಟರು. ರೈತರು, ರಾಜಕೀಯ ಪಕ್ಷಗಳು, ತಜ್ಞರು ಎಲ್ಲರೂ ಹಲವು ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಕೇಳುತ್ತಲೇ ಇದ್ದರು. ರೈತರ ಆಶೀರ್ವಾದದೊಂದಿಗೆ ನಮ್ಮ ಸರ್ಕಾರ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ನಿರ್ಧಾರ ತೆಗೆದುಕೊಂಡಿತು.ಎಷ್ಟೋ ವರ್ಷಗಳಿಂದ ಬಾಕಿ ಉಳಿದಿದ್ದ ಜಿಎಸ್ಟಿ ಕಳೆದ ವರ್ಷ ಅನುಮೋದನೆಗೊಂಡು ವಾಸ್ತವವಾಗಿದೆ. ಭಾರತೀಯರು, ನಮ್ಮ ಸೇನೆಯ ಧೈರ್ಯಶಾಲಿ ಸಿಬ್ಬಂದಿ ನಮ್ಮ ಬಗ್ಗೆ ವಿಶ್ವಾಸ ಹೊಂದಿದ್ದರು, ನಾವು ’ಏಕ ರ್ಯಾಂಕ್ ಏಕ ಪಿಂಚಣಿ’ ಬಗ್ಗೆ ನಿರ್ಧಾರ ಕೈಕೊಂಡೆವು.
ಜಾಗತಿಕ ವೇದಿಕೆಯಲ್ಲಿ ಭಾರತ ಧ್ವನಿ ಪ್ರಭಾವಶಾಲಿಯಾಗಿದೆ. ಹಿಂದೆ ಮುಚ್ಚಿದ್ದ ವಿಶ್ವ ಸಭೆಗಳಲ್ಲಿ ಇಂದು ಪ್ರಮುಖ ಭಾಗವಾಗಿದ್ದೇವೆ. ಭಾರತ ಈಗ ಪರಿವರ್ತನೆ, ಸುಧಾರಣೆ ಹಾಗೂ ನಿರ್ವಹಣೆಯ ನೆಲೆಯಾಗಿ ಪರಿಣಮಿಸಿದೆ. ದಾಖಲೆಯ ಮಟ್ಟದಲ್ಲಿ ಆರ್ಥಿಕ ಪ್ರಗತಿ ಕಾಣುತ್ತಿದೆ.
ಈಶಾನ್ಯ ಭಾಗ ದೆಹಲಿಯಿಂದ ಬಹಳ ದೂರದಲ್ಲಿದೆ ಎನ್ನಲಾಗುತ್ತಿತ್ತು. ಇಂದು ಆ ಭಾಗದಿಂದ ಇಡೀ ದೇಶಕ್ಕೆ ಸ್ಫೂರ್ತಿ ನೀಡುವ ಸುದ್ದಿಗಳು ಬರುತ್ತಿವೆ. ದೆಹಲಿಯ ಬಾಗಿಲಿಗೆ ನಾವು ಈಶಾನ್ಯ ಭಾಗವನ್ನು ತಂದಿದ್ದೇವೆ.
2022ಕ್ಕೆ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ: 2022ಕ್ಕೆ ಅಥವಾ ಸಾಧ್ಯವಾದರೆ ಅದಕ್ಕೂ ಮುನ್ನವೇ ಭಾರತವು ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿದೆ. ದೇಶದ ಹೆಣ್ಣು ಅಥವಾ ಗಂಡು ಮಕ್ಕಳು ರಾಷ್ಟ್ರಧ್ವಜದೊಂದಿಗೆ ಅಂತರಿಕ್ಷಯಾನ ಕೈಗೊಳ್ಳಲಿದ್ದಾರೆ.
Prime Minister @narendramodi meets with elated school children after his speech at #RedFort on #IndependenceDayIndia@mediasurya @shashidigital pic.twitter.com/sUMXmHSXuV
— Doordarshan News (@DDNewsLive) August 15, 2018
ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆದಿರುವ 1.3 ಕೋಟಿ ಜನರ ಪೈಕಿ 40 ಲಕ್ಷ ಜನರು ಇದೇ ಮೊದಲ ಬಾರಿಗೆ ಮುದ್ರಾ ಸಾಲ ಪಡೆದಿದ್ದಾರೆ. ಇದು ನವಭಾರತವನ್ನು ತೋರುತ್ತಿದೆ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಆಧುನಿಕತೆಯ ಸ್ಪರ್ಶ ನೀಡುವಲ್ಲಿ ಗಮನ ವಹಿಸಿದ್ದೇವೆ. ಬೀಜದಿಂದ ಮಾರುಕಟ್ಟೆ ವರಗೆ (ಜೀಜ್ ಸೆ ಬಜಾರ್ ತಕ್) ಹಲವು ಬದಲಾವಣೆಗಳನ್ನು ತರುತ್ತಿದ್ದೇವೆ.
ಸ್ವಚ್ಛ ಭಾರತ ಮಿಷನ್ ಪರಿಣಾಮವಾಗಿ ದೇಶದ ಲಕ್ಷಾಂತರ ಮಕ್ಕಳು ಆರೋಗ್ಯಪೂರ್ಣ ಜೀವನ ಸಾಗಿಸುವಂತಾಗಿದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಜನ ಆರೋಗ್ಯ ಅಭಿಯಾನ: ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ ಇದೇ ವರ್ಷ ಸೆಪ್ಟೆಂಬರ್ 25ರಂದು ಆರಂಭವಾಗಲಿದೆ. ದೇಶದ ಬಡವರು ಸಹ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ.
ಆರೋಗ್ಯ ರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಯೋಜನೆ ಭಾರತದ 50 ಕೋಟಿ ಜನರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಬಡತನದ ಹಿಡಿತದಿಂದ ಭಾರತವನ್ನು ಮುಕ್ತಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.
ತ್ರಿವಳಿ ತಲಾಕ್: ಮುಸ್ಲಿಂ ಮಹಿಳೆಯ ಪಾಲಿಗೆ ತ್ರಿವಳಿ ತಲಾಕ್ ರೂಢಿಯುವ ಶಾಪವಾಗಿದ್ದು, ಅವರಿಗೆ ಇದರಿಂದ ಅನ್ಯಾಯವಾಗಿದೆ. ನಾವು ತ್ರಿವಳಿ ತಲಾಕ್ ಅನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಕೆಲವರಿಗೆ ಅದು ಕೊನೆಯಾಗುವುದು ಬೇಕಿಲ್ಲ. ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಭರವಸೆಯನ್ನು ನೀಡುತ್ತಿದ್ದೇನೆ.
ಅತ್ಯಾಚಾರ: ಅತ್ಯಾಚಾರ ಎನ್ನುವ ಮಾನಸಿಕತೆಯಿಂದ ನಮ್ಮ ದೇಶವನ್ನು ಮುಕ್ತಗೊಳಿಸಬೇಕಿದೆ. ಮಧ್ಯ ಪ್ರದೇಶದಲ್ಲಿ ಅತ್ಯಾಚಾರಿಗಳಿಗೆ 5 ದಿನಗಳಲ್ಲಿ ಗಲ್ಲು ಶಿಕ್ಷೆಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ರಾಜಘಾಟ್ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಕೆಂಪು ಕೋಟೆಗೆ ಬಂದರು.
PM @narendramodi pays tribute to the Father of the Nation #MahatmaGandhi at #RajGhat on the #IndependenceDayIndia pic.twitter.com/7m8R7nSycp
— Doordarshan News (@DDNewsLive) August 15, 2018
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.