ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ: ಸಂಜಯ್ ಸಿಂಗ್ ಬಿಡುಗಡೆಗೆ ಒತ್ತಾಯ, ಬಿಜೆಪಿ ಕಚೇರಿ ಎದುರು ಎಎಪಿ ಪ್ರತಿಭಟನೆ

Published 14 ಅಕ್ಟೋಬರ್ 2023, 4:43 IST
Last Updated 14 ಅಕ್ಟೋಬರ್ 2023, 4:43 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಪಕ್ಷದ ನಾಯಕ ಸಂಜಯ್‌ ಸಿಂಗ್‌ ಬಂಧನ ಖಂಡಿಸಿರುವ ಪಕ್ಷದ ಕಾರ್ಯಕರ್ತರು, ಸಂಜಯ್‌ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಬಿಜೆಪಿ ಪ್ರಧಾನ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಸಂಜಯ್‌ ಸಿಂಗ್‌ ಅವರ ಮುಖವಾಡಗಳನ್ನು ಧರಿಸಿದ ಎಎಪಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು, ದೆಹಲಿಯಾದ್ಯಂತ ಘೋಷಣೆಗಳನ್ನು ಕೂಗಿ ಎಎಪಿ ನಾಯಕನನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಫಲಕಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ.

ಎಎಪಿಯ ರಾಜ್ಯಸಭಾ ಸಂಸದ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂದೀಪ್‌ ಪಾಠಕ್‌ ಸಿಂಗ್‌ ಅವರ ಬಂಧನದ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು, ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳನ್ನು ತೊಲಗಿಸಲು ಕುತಂತ್ರ ನಡೆಸುತ್ತಿದೆ, ಬಿಜೆಪಿಯನ್ನು ಪ್ರಶ್ನಿಸುವವರನ್ನು ಜೈಲಿಗೆ ಹಾಕಲಾಗುತ್ತದೆ. ಪ್ರಾಮಾಣಿಕರು ಜೈಲು ಪಾಲಾದರೆ ಭ್ರಷ್ಟರು ಜೈಲಿನ ಹೊರಗೆ ಉಳಿದಿದ್ದಾರೆ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರವು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸುತ್ತಿರುವ ರೀತಿಯನ್ನು ಇಡೀ ದೇಶವೇ ಗಮನಿಸುತ್ತಿದೆ. ಎಎಪಿಯ ಧ್ವನಿಯನ್ನು ಹತ್ತಿಕ್ಕಲು ಹೇಗೆ ನಕಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ದೇಶವೇ ಗಮನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರೀಯ ತನಿಖಾ ದಳದಂತಹ (ಸಿಬಿಐ) ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತುವವರು ಇ.ಡಿ ಮತ್ತು ಸಿಬಿಐ ದಾಳಿಗಳನ್ನು ಎದುರಿಸುತ್ತಾರೆ. ಪ್ರಾಮಾಣಿಕತೆ ಹೊಂದಿರುವವರನ್ನು ಜೈಲಿಗೆ ಅಟ್ಟಲಾಗುತ್ತದೆ ಎಂದು ಸಚಿವ, ಎಎಪಿ ರಾಜ್ಯಾಧ್ಯಕ್ಷ ಗೋಪಾಲ್‌ ರೈ ಆರೋಪಿಸಿದರು.

ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಅವರನ್ನು ಅ.4ರಂದು (ಬುಧವಾರ) ಬಂಧಿಸಲಾಗಿದ್ದು, ಸಿಂಗ್‌ ಅವರ ನ್ಯಾಯಾಂಗ ಬಂಧನವನ್ನು ವಿಚಾರಣಾ ನ್ಯಾಯಾಲಯವು ಅಕ್ಟೋಬರ್‌ 27ರವರೆಗೆ ವಿಸ್ತರಿಸಿದೆ. ಇದನ್ನು ಖಂಡಿಸಿ ಎಎಪಿ ಕಾರ್ಯಕರ್ತರು ಬಿಜೆಪಿ ಪ್ರಧಾನ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT