ನವದೆಹಲಿ: ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿ ತಬ್ಲಿಘಿ ಜಮಾತ್ ಕಾರ್ಯಕ್ರಮ ನಡೆಸಿತ್ತು ಎಂಬ ಆರೋಪದ ಮೇರೆಗೆ ಕಳೆದ 2 ವರ್ಷಗಳಿಂದ ಬಂದ್ ಆಗಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಗುರುವಾರ ಪುನರಾರಂಭವಾಗಿದೆ.
ಶಬ್-ಇ-ಬರಾತ್ ಹಿನ್ನೆಲೆಯಲ್ಲಿ ಭಕ್ತರ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲು ದೆಹಲಿ ಹೈಕೋರ್ಟ್ ಮಸೀದಿ ಪುನರಾರಂಭಕ್ಕೆ ಬುಧವಾರ ಹಸಿರು ನಿಶಾನೆ ತೋರಿತ್ತು. ಹೀಗಾಗಿ ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಮಸೀದಿಯನ್ನು ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2020ರ ಮಾರ್ಚ್ನಲ್ಲಿ ಕೊರೊನಾ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ತಬ್ಲಿಘಿ ಜಮಾತ್ ಸಮಾವೇಶ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವರಿಗೆ ಕೋವಿಡ್ ತಗುಲಿ, ದೇಶದ ನಾನಾ ಭಾಗಗಳಿಗೆ ಹರಡುವಂತಾಯಿತು ಎಂಬ ಆರೋಪದ ಕಾರಣಕ್ಕೆ ಈ ಮಸೀದಿ ವಿವಾದದ ಕೇಂದ್ರ ಬಿಂದುವಾಗಿತ್ತು.