ನವದೆಹಲಿ: ಏರ್ಸೆಲ್ ಮ್ಯಾಕ್ಸಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ‘ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು’ ಆಧಾರವಿಲ್ಲದ ಆರೋಪಗಳನ್ನು ಮಾಡಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ರಜನೀಶ್ ಕಪೂರ್ ಅವರ ವಿರುದ್ಧಇ.ಡಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ಅವರು ಸುಪ್ರೀಂ ಕೋರ್ಟ್ನಲ್ಲಿ ಗುರುವಾರ ಅಪರಾಧ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
ನನ್ನ ವಿರುದ್ಧದ ಆರೋಪ ‘2ಜಿ ಸ್ಪೆಕ್ಟ್ರಂ ಹಾಗೂ ಏರ್ಸೆಲ್–ಮ್ಯಾಕ್ಸಿಸ್ ಪ್ರಕರಣಗಳು ಇತ್ಯರ್ಥವಾಗುವುದನ್ನು ವಿಳಂಬಗೊಳಿಸುವ ಲಜ್ಜೆಗೆಟ್ಟ ಯತ್ನ’ ಎಂದು ರಾಜೇಶ್ವರ್ ಹೇಳಿದ್ದಾರೆ.
‘7 ವರ್ಷಗಳ ಹಿಂದೆಯೂ ನನ್ನ ವಿರುದ್ಧಇದೇ ಆರೋಪಗಳನ್ನು ಮಾಡಲಾಗಿತ್ತು. ಆಗ ತನಿಖೆ ನಡೆಸಿದ್ದ ಇ.ಡಿ, ಸಿಬಿಐ ಹಾಗೂ ಸಿವಿಸಿ ನನಗೆ ಕ್ಲೀನ್ಚಿಟ್ ನೀಡಿತ್ತು. ಹೊಸದಾಗಿ ಸಲ್ಲಿಸಿರುವ ಪಿಐಎಲ್ನಲ್ಲಿ ಯಾವುದೇ ಹೊಸ ಸಾಕ್ಷ್ಯಗಳಿಲ್ಲ’ ಎಂದು ತಿಳಿಸಿದ್ದಾರೆ.
ರಾಜೇಶ್ವರ್ ಅವರು ಅಕ್ರಮ ಸ್ವತ್ತು ಹೊಂದಿದ್ದಾರೆ ಎಂದು ಆರೋಪಿಸಿ ರಜನೀಶ್ ಬುಧವಾರ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ್ದ ಸುಪ್ರೀಂ ರಾಜೇಶ್ವರ್ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿತ್ತು.