ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ರಾಮ ಮಂದಿರ: ಒಂದೇ ದಿನದಲ್ಲಿ ₹3.17 ಕೋಟಿ ದೇಣಿಗೆ ಸಂಗ್ರಹ

Published 25 ಜನವರಿ 2024, 2:28 IST
Last Updated 25 ಜನವರಿ 2024, 2:28 IST
ಅಕ್ಷರ ಗಾತ್ರ

ಅಯೋಧ್ಯೆ: ರಾಮಮಂದಿರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಪ್ರಾಣ ಪ್ರತಿಷ್ಠಾಪನೆಯಾದ ಮರುದಿನ ಒಂದೇ ದಿನದಲ್ಲಿ ₹3.17 ಕೋಟಿ ದೇಣಿಗೆ ಸಂಗ್ರಹವಾಗಿದೆ. ಬುಧವಾರ 2.5 ಲಕ್ಷ ಜನ ಬಾಲರಾಮನ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಅವರು, ಪ್ರಾಣ ಪ್ರತಿಷ್ಠಾಪನೆಯಾದ ನಂತರದ ಎರಡನೇ ದಿನವಾದ ಬುಧವಾರ ರಾತ್ರಿ 10 ಗಂಟೆಯವರೆಗೆ 2.5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮೊದಲ ದಿನವೇ 5 ಲಕ್ಷಕ್ಕೂ ಹೆಚ್ಚು ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದರು.

ದೇವಾಲಯದಲ್ಲಿ ತೆರೆಯಲಾದ 10 ಕೌಂಟರ್‌ಗಳಲ್ಲಿ ಮತ್ತು ಆನ್‌ಲೈನ್ ಮೂಲಕ ಭಕ್ತರು ಪ್ರಾಣ ಪ್ರತಿಷ್ಠಾಪನೆಯಾದ ಮರುದಿನ ಒಂದೇ ದಿನದಲ್ಲಿ ಒಟ್ಟು ₹3.17 ಕೋಟಿ ದೇಣಿಗೆ ನೀಡಿದ್ದಾರೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ.

ದರ್ಶನ ಅವಧಿ ವಿಸ್ತರಣೆ

ಇನ್ನು ಮುಂದೆ ಭಕ್ತರು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ದೇವಾಲಯಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆಯಬಹುದು ಎಂದು ಟ್ರಸ್ಟ್‌ ಹೇಳಿದೆ. ಈ ಮೊದಲು ಬೆಳಿಗ್ಗೆ 7 ರಿಂದ 11.30 ಮತ್ತು ಮಧ್ಯಾಹ್ನ 2 ರಿಂದ 7 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿತ್ತು.

ಬಿಗಿ ಭದ್ರತೆ

ಭಕ್ತಾದಿಗಳಿಗೆ ಭದ್ರತೆ ಮತ್ತು ಅನುಕೂಲಕ್ಕಾಗಿ ಆಡಳಿತ ಮತ್ತು ಪೊಲೀಸರು ಸನ್ನದ್ಧರಾಗಿದ್ದಾರೆ. ದೇವಾಲಯದ ಆವರಣದ ಹೊರಗೆ ರ್‍ಯಾಪಿಡ್‌ ಆಕ್ಷನ್‌ ಫೋರ್ಸ್‌ (RAF) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ತಂಡಗಳನ್ನು ನಿಯೋಜಿಸಲಾಗಿದ್ದು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT