ಜಬಲ್ಪುರ (ಮಧ್ಯಪ್ರದೇಶ): ‘ಹಿಂದುತ್ವ ಎಂಬುದು ಧರ್ಮವಲ್ಲ. ಅದು ಸಮಾಜದಲ್ಲಿ ಕ್ಷೋಭೆ ಹುಟ್ಟುಹಾಕುವ ಉದ್ದೇಶ ಒಳಗೊಂಡಿದೆ. ಅದನ್ನು ಒಪ್ಪದವರ ಮೇಲೆ ದಾಳಿ ನಡೆಸಲಾಗುತ್ತದೆ’ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ‘ನಾವು ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿದ್ದೇವೆ. ಏಕೆಂದರೆ ಅದು ಸಾಮರಸ್ಯ ಹಾಗೂ ಸರ್ವರ ಕಲ್ಯಾಣವನ್ನು ಬೋಧಿಸುತ್ತದೆ. ಹಿಂದುತ್ವವನ್ನು ನಾವು ಧರ್ಮ ಎಂದು ಪರಿಗಣಿಸುವುದಿಲ್ಲ’ ಎಂದಿದ್ದಾರೆ.
‘ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಯುವ ಘಟಕವಾಗಿರುವ ಬಜರಂಗ ದಳವು ಗೂಂಡಾಗಳ ಗುಂಪು’ ಎಂದು ಟೀಕಿಸಿದ್ದಾರೆ.
‘ಸನಾತನ ಧರ್ಮವು ‘ಧರ್ಮಕ್ಕೆ ಜಯವಾಗಲಿ’, ‘ಅಧರ್ಮ ಅಳಿಯಲಿ’, ‘ವಿಶ್ವದ ಕಲ್ಯಾಣವಾಗಲಿ’ ಎಂಬ ಘೋಷವಾಕ್ಯಗಳನ್ನು ಒಳಗೊಂಡಿರುತ್ತದೆ. ಆದರೆ ಹಿಂದುತ್ವದಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ಸಿದ್ಧಾಂತ ಒಪ್ಪದವರ ಮೇಲೆ ಕಟ್ಟಿಗೆಗಳಿಂದ ಹಲ್ಲೆ ನಡೆಸುವುದು, ಅಂತಹವರ ಮನೆಗಳನ್ನು ಧ್ವಂಸಗೊಳಿಸುವುದು ಹಾಗೂ ಹಣ ಲೂಟಿ ಮಾಡುವುದೇ ಹಿಂದುತ್ವ’ ಎಂದು ಆರೋಪಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು 'ಬಜರಂಗ ದಳ'ವನ್ನು 'ಬಜರಂಗ ಬಲಿ'ಯೊಂದಿಗೆ (ಹನುಮಾನ್) ಸಮೀಕರಿಸುತ್ತಿರುವುದು ನೋವಿನ ಸಂಗತಿ. ಇದು ದೈವಕ್ಕೆ ಮಾಡಿದ ಅಪಚಾರ. ಅದಕ್ಕಾಗಿ ಬಿಜೆಪಿಯವರು ಕ್ಷಮೆ ಕೋರಲಿ. ಗೂಂಡಾಗಳ ಗುಂಪಾಗಿರುವ ಬಜರಂಗ ದಳವು ಜಬಲ್ಪುರದಲ್ಲಿರುವ ಕಾಂಗ್ರೆಸ್ ಸಮಿತಿಯ ಕಚೇರಿಯನ್ನು ಧ್ವಂಸಗೊಳಿಸಲು ಮುಂದಾಗಿತ್ತು’ ಎಂದು ದೂರಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗ ದಳ ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಎಲ್ಲಾ ಸಂಘಟನೆಗಳನ್ನೂ ನಿಷೇಧಿಸುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ದಿಗ್ವಿಜಯ್, ‘ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತದೆ. ಕಾನೂನನ್ನು ಗೌರವಿಸುತ್ತದೆ. ನಿಯಮಗಳನ್ನು ಪಾಲಿಸುತ್ತದೆ. ಸಮಾಜದಲ್ಲಿ ದ್ವೇಷ ಹರಡುವಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಧರ್ಮಾತೀತವಾಗಿ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.