ನವದೆಹಲಿ: ಅಬಕಾರಿ ನೀತಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ‘ಸತ್ಯ ಎದುರಿಸುವ ಧೈರ್ಯ ಕೇಜ್ರಿವಾಲ್ಗೆ ಇಲ್ಲ‘ ಎಂದು ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪತ್ರಾ, ‘ಸತ್ಯ ತಿಳಿದಿದ್ದರಿಂದಲೇ ತನಿಖಾ ಸಂಸ್ಥೆ ವಿಚಾರಣೆಗೆ ಹಾಜರಾಗದೆ ಓಡಿಹೋಗಿದ್ದಾರೆ. ಸತ್ಯವನ್ನು ಎದುರಿಸುವ ಧೈರ್ಯ ಅವರಿಗಿಲ್ಲ(ಕೇಜ್ರಿವಾಲ್). ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಮೂಲಕ ಅಬಕಾರಿ ನೀತಿ ಹಗರಣದಲ್ಲಿ ತಮ್ಮ ಪಾತ್ರವಿದೆ ಎಂದು ‘ದೆಹಲಿಯ ರಾಜ’ ಒಪ್ಪಿಕೊಂಡಿದ್ದಾರೆ’ ಎಂದರು.
‘ಸರಿಯಾದ ಪುರಾವೆಗಳಿಲ್ಲದೆ ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಯುವುದಿಲ್ಲ. ಆಳವಾಗಿ ತನಿಖೆ ನಡೆಸಿಯೇ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದೆ ಎಂದು ನಾವು ಬಲವಾಗಿ ನಂಬುತ್ತೇವೆ. ಯಾರು ಅಪ್ರಮಾಣಿಕರು ಎಂದು ಇದೀಗ ಸಾಬೀತಾಗಿದೆ’ ಎಂದು ಹೇಳಿದರು.
ಯಾವ ಮಾನದಂಡದ ಮೇಲೆ ನನಗೆ ಸಮನ್ಸ್ ನೀಡಲಾಗಿದೆ ಎಂಬ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪತ್ರಾ, ‘ನೀವು ಕಾನೂನಿಗಿಂತ ದೊಡ್ಡವರಾ? ದೆಹಲಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ನಿಮಗೆ ಸಮನ್ಸ್ ನೀಡಬಾರದೆ?’ ಎಂದು ಕೇಳಿದ್ದಾರೆ.
ಅಕ್ಟೋಬರ್ 30ರಂದು ಜಾರಿ ನಿರ್ದೇಶನಾಲಯ ಕೇಜ್ರಿವಾಲ್ಗೆ ನೋಟಿಸ್ ನೀಡಿತ್ತು. ನೋಟಿಸ್ಗೆ ಉತ್ತರಿಸಿದ್ದ ಕೇಜ್ರಿವಾಲ್, ಬಿಜೆಪಿಯ ಅಣತಿಯಂತೆ ನೋಟಿಸ್ ಕಳುಹಿಸಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ನೋಟಿಸ್ ವಾಪಾಸ್ ಪಡೆಯುವಂತೆಯೂ ತಿಳಿಸಿದ್ದರು.