ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರುವ ಪಕ್ಷದ ಕಾರ್ಯಕರ್ತರು, ಇಲ್ಲಿನ ಇಕಾನಾ ಮೈದಾನ ಪ್ರವೇಶಿಸುವ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬೇಕು. ತಾವು ಬರುವ ವಾಹನದ ಮೇಲೆ ಪಕ್ಷದ ಧ್ವಜವನ್ನು ಹಾಕುವುದು ಕಡ್ಡಾಯ ಎಂದು ಜಿಲ್ಲಾ ಘಟಕಗಳಿಗೆ ಬಿಜೆಪಿ ರವಾನಿಸಿರುವ ಸಂದೇಶದಲ್ಲಿ ಸೂಚನೆ ನೀಡಲಾಗಿದೆ.
ಸಾಹಿತಿಗಳು, ವೃತ್ತಿಪರರು, ವೈದ್ಯರು, ಎಂಜಿನಿಯರ್ಗಳು, ಸ್ವಾಮೀಜಿಗಳು ಹಾಗೂ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ ಇಬ್ಬರು ಕಾರ್ಯಕರ್ತರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರವೇಶವಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಾಗಲಿದ್ದಾರೆ. ಪಂಚಾಯಿತಿಗಳ ಮುಖ್ಯಸ್ಥರು ಮತ್ತು ಸ್ಥಳೀಯ ಸಂಸ್ಥೆಗಳ ಮೇಯರ್ಗಳೂ ಭಾಗಿಯಾಗಲಿದ್ದಾರೆ.