ಥಾಣೆ: ಪೊಲೀಸ್ ಠಾಣೆಯಲ್ಲಿ ಶಿವಸೇನಾ ನಾಯಕನ ಮೇಲೆ ಗುಂಡು ಹಾರಿಸಿದ್ದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಅವರ ವಿರುದ್ಧ ಮತ್ತೊಂದು ಆರೋಪದಡಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಜಾತಿನಿಂದನೆ ಮಾಡಿದ್ದಾರೆ ಎಂದು ಹಳ್ಳಿಯೊಂದರ ಮಹಿಳೆಯೊಬ್ಬರು ಶಾಸಕ ಮತ್ತು ಇತರೆ 7 ಮಂದಿ ವಿರುದ್ಧ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ಹಿಲ್ ಲೈನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೊಠಡಿಯಲ್ಲಿ ಶಿವಸೇನಾ ನಾಯಕ ಮಹೇಶ್ ಗಾಯಕ್ವಾಡ್ ಅವರ ಮೇಲೆ 7 ಗುಂಡುಗಳನ್ನು ಹಾರಿಸಿದ್ದ ಗಣಪತ್ ಗಾಯಕ್ವಾಡ್, ಅವರ ಸಹಚರರನ್ನೂ ಗಾಯಗೊಳಿಸಿದ್ದರು. ಪೂರ್ವ ಕಲ್ಯಾಣ್ ವಿಧಾನಸಭಾ ಕ್ಷೇತ್ರದ ಮೂರನೇ ಬಾರಿಯ ಶಾಸಕ ಗಾಯಕ್ವಾಡ್ ವಿರುದ್ಧ ಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ.
‘ದ್ವಾರ್ಲಿ ಗ್ರಾಮದ ಮಹಿಳೆಯೊಬ್ಬರ ದೂರಿನ ಆಧಾರದ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಗಾಯಕ್ವಾಡ್ ಮತ್ತು ಇತರೆ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಹಿಲ್ ಲೈನ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಮಹಿಳೆಯ ಆರೋಪದ ಕುರಿತಂತೆ ತನಿಖೆ ನಡೆಯುತ್ತಿದೆ’ಎಂದೂ ಅವರು ತಿಳಿಸಿದ್ದಾರೆ.