ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಸೋಗಿನ ವಂಶಾಡಳಿತಕ್ಕೆ ಕೊನೆ: ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು

ಮೋದಿ ಸರ್ವಾಧಿಕಾರಿಯಾಗಲಿದ್ದಾರೆ ಎಂಬ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು
Published 30 ಜನವರಿ 2024, 15:45 IST
Last Updated 30 ಜನವರಿ 2024, 15:45 IST
ಅಕ್ಷರ ಗಾತ್ರ

ನವದೆಹಲಿ: ‘ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾದರೆ, ಸರ್ವಾಧಿಕಾರಿಯಾಗಲಿದ್ದಾರೆ’ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದೆ. 

ಅಲ್ಲದೆ, ಪ್ರಜಾಪ್ರಭುತ್ವದ ಸೋಗಿನಲ್ಲಿ ನಡೆಯುತ್ತಿದ್ದ ವಂಶಪಾರಂಪರ್ಯ ರಾಜಕೀಯವು ದೇಶದಲ್ಲಿ ಕೊನೆಯಾಗುತ್ತಿದ್ದು, ನಿಜವಾದ ಪ್ರಜಾಪ್ರಭುತ್ವ ಉದಯವಾಗುತ್ತಿದೆ ಎಂದು ಖರ್ಗೆ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ. 

ಈ ಕುರಿತು ಮಂಗಳವಾರ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ‘ಪ್ರಜಾಪ್ರಭುತ್ವದ ವೇಷದಲ್ಲಿ ನಡೆಯುತ್ತಿದ್ದ ವಂಶಪಾರಂಪರ್ಯ ರಾಜಕೀಯ ಕೊನೆಯಾಗುತ್ತಿದ್ದು, ತಮ್ಮ ಭವಿಷ್ಯದ ಬಗ್ಗೆ ಅವರು ಚಿಂತಿತರಾಗಿದ್ದಾರೆ. ಜಮ್ಮು–ಕಾಶ್ಮೀರದಲ್ಲಿ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳಾಗಿರಬಹುದು, ಪಂಜಾಬ್‌ನಲ್ಲಿ ಬಾದಲ್ ಕುಟುಂಬ, ಹರಿಯಾಣದಲ್ಲಿ ಹೂಡಾ ಕುಟುಂಬ ಆಗಿರಬಹುದು– ಚುನಾವಣೆ ಸೋತಿವೆ. ರಾಜಸ್ಥಾನದಲ್ಲಿ ಅಶೋಕ್ ಗೆಹಲೋತ್ ಮಗ ಸೋತಿದ್ದಾನೆ, ಅಖಿಲೇಶ್ ಯಾದವ್ ಅವರ ಪತ್ನಿ ಹಾಗೂ ಲಾಲು ಪ್ರಸಾದ್ ಯಾದವ್ ಅವರ ಮಗಳು ಸಹ ಚುನಾವಣೆ ಗೆಲ್ಲಲು ಆಗಿಲ್ಲ. ಅಲ್ಲದೆ, ವಂಶಪಾರಂಪರ್ಯದ ದೊಡ್ಡ ಚಿಹ್ನೆಯಂತಿದ್ದ ರಾಹುಲ್ ಗಾಂಧಿ ಸಹ ಸೋತಿದ್ದಾರೆ’ ಎಂದು ಹೇಳಿದರು. 

ಪ್ರಜಾಪ್ರಭುತ್ವವನ್ನು ಉಳಿಸಲು 2024ರ ಲೋಕಸಭೆ ಚುನಾವಣೆಯು ಜನರಿಗೆ ಇರುವ ಕೊನೆಯ ಅವಕಾಶವಾಗಿದೆ. ಒಂದು ವೇಳೆ ಮೋದಿ ಅವರು ಮತ್ತೊಂದು ಚುನಾವಣೆ ಗೆದ್ದರೆ, ದೇಶದಲ್ಲಿ ಸರ್ವಾಧಿಕಾರ ಜಾರಿಯಾಗಲಿದೆ. ರಷ್ಯಾದ ಪುಟಿನ್ ರೀತಿ ಬಿಜೆಪಿಯು ಭಾರತದಲ್ಲಿ ಆಡಳಿತ ನಡೆಸಲಿದೆ ಎಂದು ಖರ್ಗೆ ಹೇಳಿದ್ದರು.  

‘ ಖರ್ಗೆ ಹತಾಶೆಗೆ ‘ಇಂಡಿಯಾ’ ಜತೆ ಕಾಂಗ್ರೆಸ್ ಬಿಕ್ಕಟ್ಟು ಕಾರಣ’ (ಹಮೀರಪುರ ವರದಿ): ‘ಇಂಡಿಯಾ ಮೈತ್ರಿಕೂಟದೊಂದಿಗೆ ಕಾಂಗ್ರೆಸ್ ಪಕ್ಷದ ಬಿಕ್ಕಟ್ಟಿನಿಂದಾಗಿ ಹತಾಶೆಗೊಂಡಿರುವ ಕಾರಣ ಕಾಂಗ್ರೆಸ್ ಅಧ್ಯಕ್ಷರು ಸಿಡುಕಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ. 

ಹಿಮಾಚಲ ಪ್ರದೇಶದ ಹಮೀರಪುರ ಜಿಲ್ಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಸಿದ್ಧತೆಯನ್ನು ಮಂಗಳವಾರ ಪರಿಶೀಲಿಸಿದ ಅವರು, ‘ಲೋಕಸಭೆ ಚುನಾವಣೆಗೂ ಮುನ್ನವೇ ಇಂಡಿಯಾ ಮೈತ್ರಿಕೂಟ ಮುರಿದುಬೀಳಲಿದೆ. ಸ್ವತಂತ್ರವಾಗಿ ಪ್ರತಿಪಕ್ಷ ನಾಯಕನಾಗಲು ಅಗತ್ಯವಿರುವಷ್ಟು ಕ್ಷೇತ್ರಗಳನ್ನು ಗೆಲ್ಲಲಾಗದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ’ ಎಂದರು. 

‘ಮಾನವ ಬಂಡವಾಳದ ವ್ಯವಸ್ಥಿತ ಬಲಿ’ ನವದೆಹಲಿ

‘ಸಾಮಾಜಿಕ ವಲಯದ ಮೇಲಿನ ವೆಚ್ಚಗಳನ್ನು ತಗ್ಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಭಾರತದ ಮಾನವ ಬಂಡವಾಳವನ್ನು ವ್ಯವಸ್ಥಿತವಾಗಿ ಬಲಿಕೊಡುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.  ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ವೆಚ್ಚವನ್ನು ಕಡಿಮೆ ಮಾಡಿದೆ ಎಂಬ ಕುರಿತ ವರದಿಯನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಅವರು ಮೋದಿ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕಡಿಮೆ ವೆಚ್ಚ ಮಾಡುತ್ತಿದೆ. ಜನಪ್ರಿಯತೆಗಾಗಿ ಕೋಟ್ಯಂತರ ವೆಚ್ಚ ಮಾಡುವ ಸರ್ಕಾರಕ್ಕೆ ವಿಕಸಿತ ಭಾರತವನ್ನು ಖಾತ್ರಿಪಡಿಸಲಾಗುತ್ತಿಲ್ಲ. 2024 ಕಲ್ಯಾಣ ಮತ್ತು ನ್ಯಾಯವನ್ನು ಸರಿಪಡಿಸಲು ಇರುವ ವರ್ಷವಾಗಿದೆ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT