ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಎಂಸಿ ಕಾರ್ಯಕರ್ತನ ಕೊಲೆ: ಬಿಜೆಪಿ ವಿರುದ್ಧ ಮಮತಾ ಆರೋಪ

Published 25 ಮೇ 2024, 15:28 IST
Last Updated 25 ಮೇ 2024, 15:28 IST
ಅಕ್ಷರ ಗಾತ್ರ

ಹರೋಆ: ತಮ್ಮ ಪ್ರಮುಖ ಎದುರಾಳಿ ಸುವೇಂದು ಅಧಿಕಾರಿಯ ಪುರ್ಬ ಮೇದಿನಿಪುರ ಜಿಲ್ಲೆಯಲ್ಲಿ ಬಿಜೆಪಿಯು ಭಯೋತ್ಪಾದನೆ ಮಾಡುತ್ತಿದ್ದು, ಒಬ್ಬ ಟಿಎಂಸಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದರು.

ಬಶೀರ್‌ಹಾಟ್ ಲೋಕಸಭಾ ಕ್ಷೇತ್ರದ ಹರೋಆದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ನಿನ್ನೆ ಕೂಡ ಅವರು ಪುರ್ಬ ಮೇದಿನಿಪುರದ ಮಹಿಸದಲ್‌ನ ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಭಯದಿಂದ ಅವರು ಜನರ ಮೇಲೆ ಮತ್ತು ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿಗಳನ್ನು ಮಾಡುತ್ತಿದ್ದು, ಹತ್ಯೆ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನಗಳನ್ನು ನಾವು ಪ್ರತಿರೋಧಿಸುತ್ತಿದ್ದೇವೆ’ ಎಂದು ಹೇಳಿದರು.

ಎರಡು ದಿನಗಳ ಹಿಂದೆ ಪುರ್ಬ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಬಿಜೆಪಿಯ ಕಾರ್ಯಕರ್ತೆಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಅವರ ಮಗ, ಎಸ್‌ಸಿ, ಎಸ್‌ಟಿ ಮೋರ್ಚಾ ಮುಖಂಡ ಗಂಭೀರವಾಗಿ ಗಾಯಗೊಂಡಿದ್ದರು. ಅದರ ನಂತರ ದುಷ್ಕರ್ಮಿಗಳು ಹಲವು ಮನೆಗಳಿಗೆ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ನಂದಿಗ್ರಾಮದ ಘಟನೆಗೆ ಟಿಎಂಸಿ ಗೂಂಡಾಗಳು ಕಾರಣ ಎಂದು ನಂದಿಗ್ರಾಮದ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಆರೋಪಿಸಿದ್ದರು. ಆದರೆ, ಅದು ಬಿಜೆಪಿ ಎರಡು ಗುಂಪುಗಳ ಸಂಘರ್ಷ ಎಂದು ಟಿಎಂಸಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT