ನವದೆಹಲಿ (ಪಿಟಿಐ): ‘ದೇಶದಲ್ಲಿ ಮುಸ್ಲಿಂ ಮುಕ್ತ ಶಾಸಕರು ಹಾಗೂ ಸಂಸದರನ್ನು ಹೊಂದುವುದು ಬಿಜೆಪಿಯ ಮುಖ್ಯ ಉದ್ದೇಶ’ ಎಂದು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಆರೋಪಿಸಿದ್ದಾರೆ.
ಭಾನುವಾರ ಮಾತನಾಡಿದ ಅವರು, ‘ಬಹುಸಂಖ್ಯಾತರ ಓಲೈಕೆಗಾಗಿ ಬಿಜೆಪಿಯು ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸಮುದಾಯದ ಜನರನ್ನು ಜೈಲಿಗೆ ಕಳುಹಿಸುತ್ತಿದೆ. ಬುಲ್ಡೋಜರ್ಗಳನ್ನು ಬಳಸಿ ಮನೆಗಳನ್ನೂ ಕೆಡವುತ್ತಿದೆ’ ಎಂದು ದೂರಿದ್ದಾರೆ.
‘ಬಿಜೆಪಿಯು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಪಾಸ್ಮಾಂಡಾ ಮುಸ್ಲಿಮರನ್ನು ತಲುಪುವ ದಿಸೆಯಲ್ಲೂ ಕೆಲಸ ಮಾಡಬೇಕು ಎಂದು ಹೈದರಾಬಾದ್ನಲ್ಲಿ ನಡೆದಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಒಂದು ಪ್ರಹಸನವಷ್ಟೆ. ಮುಸ್ಲಿಮರ ಬಗ್ಗೆ ಅವರಿಗೆ ಕಳಕಳಿ ಇದ್ದಿದ್ದರೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮುದಾಯದ ನಾಯಕರಿಗೆ ಏಕೆ ಟಿಕೆಟ್ ನೀಡಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.
‘ವಿರೋಧ ಪಕ್ಷ ಮುಕ್ತ ಭಾರತ ಬಿಜೆಪಿಯ ಗುರಿ. ಸಮಾಜದಲ್ಲಿ ದ್ವೇಷ ಬಿತ್ತುವ ಮೂಲಕಮುಸ್ಲಿಮರ ನೈಜ ಸಮಸ್ಯೆಗಳನ್ನು ಮರೆಮಾಚಲು ಆ ಪಕ್ಷ ಮುಂದಾಗಿದೆ’ ಎಂದೂ ಆರೋಪಿಸಿದರು.