ರಾಯಪುರ: 2024ರ ಲೋಕಸಭಾ ಚುನಾವಣೆಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವ ಕುರಿತು ಮತ್ತು ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇಲ್ಲಿ ಶುಕ್ರವಾರ ಆರಂಭವಾಗುವ ಕಾಂಗ್ರೆಸ್ ಮಹಾಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸಾರಥ್ಯಕ್ಕೆ ಅಧಿಕೃತವಾಗಿ ಅನುಮೋದನೆ ನೀಡಲಿರುವ 85ನೇ ಮಹಾಧಿವೇಶನದಲ್ಲಿ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.
‘ಭಾರತ್ ಜೋಡೊ ಯಾತ್ರೆ’ಯ ಯಶಸ್ಸಿನ ಬಳಿಕ ನಡೆಯುತ್ತಿರುವ ಮಹಾಧಿವೇಶನದಲ್ಲಿ 15ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದೂ ಮೂಲಗಳು ಹೇಳಿವೆ.
ಮೂರು ದಿನಗಳ ಈ ಅಧಿವೇಶನದ ಮೊದಲ ದಿನ ಪಕ್ಷದ ಚಾಲನಾ ಸಮಿತಿಯು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಗೆ (ಸಿಡಬ್ಲ್ಯೂಸಿ) ಚುನಾವಣೆ ನಡೆಸಬೇಕೋ ಬೇಡವೊ ಎಂಬುದನ್ನು ನಿರ್ಧರಿಸಲಿದೆ ಎಂದೂ ಹೇಳಿದೆ.
ಸಿಡಬ್ಲ್ಯೂಸಿಗೆ ಚುನಾವಣೆ ನಡೆಯಬೇಕು ಎಂದು ಪಕ್ಷದ ಕಿರಿಯರ ವಿಭಾಗವೊಂದು ಬಯಸಿದೆ ಆದರೆ ಹಿರಿಯ ಮುಖಂಡರು ನಾಮನಿರ್ದೇಶನವನ್ನು ಬಯಸುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಪಕ್ಷವು ಅಧಿಕಾರದಲ್ಲಿರುವ ಛತ್ತೀಸಗಢ ಮತ್ತು ರಾಜಸ್ಥಾನ ಸೇರಿದಂತೆ 9 ರಾಜ್ಯಗಳಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.