ಕೋಲ್ಕತ್ತ: ಕೋಲ್ಕತ್ತದ ಎಲಿಜಿನ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೌರಾ ನಿವಾಸಿ ಪಂಕಜ್ ಸಿಂಗ್ ಹಲ್ಲೆಗೊಳಗಾದ ವ್ಯಕ್ತಿ. ಭಾನುವಾರ ರಾತ್ರಿ ಸ್ನೇಹಿತರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಂಜಾನೆ ಮನೆಗೆ ವಾಪಸಾಗುತ್ತಿದ್ದ ವೇಳೆ ಗೋರ್ಕಿ ಸದನದ ಬಳಿ ಈ ಘಟನೆ ನಡೆದಿದೆ.
ಮೋಟಾರ್ ಸೈಕಲ್ಗಳ ಮೇಲೆ ಬಂದ 15 ರಿಂದ 18 ವಯೋಮಾನದ ಯುವಕರು ಮೊದಲು ಇವರ ಕಾರನ್ನು ಅಡ್ಡಗಟ್ಟಿ, ಹಲ್ಲೆ ಮಾಡಿದ್ದಾರೆ. ನಂತರ ಅವರನ್ನು ಕಾರಿಂದ ಹೊರಗಡೆ ಎಳೆದಿದ್ದಾರೆ. ಈ ಗುಂಪಿನಲ್ಲಿದ್ದವನೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ, ಸಿಂಗ್ ಅವರ ಬಲಗೈಗೆ ಗುಂಡು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಉದ್ಯಮ ಕ್ಷೇತ್ರದ ಪ್ರತಿಸ್ಪರ್ಧಿ ವಿಚಾರಕ್ಕೆ ಸಂಬಂಧಿಸಿದ ಘಟನೆಯಾಗಿರಬಹುದು ಎಂದು ಶೇಕ್ಸ್ಪಿಯರ್ ಸರಾನಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.