ನವದೆಹಲಿ/ವಿಶ್ವಸಂಸ್ಥೆ: ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮಾಡಿರುವ ಆರೋಪ ಪೂರ್ವಗ್ರಹದಿಂದ ಕೂಡಿದೆ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಭಾರತ ಗುರುವಾರ ಹೇಳಿದೆ.
ಹರ್ದೀಪ್ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಭಾರತದೊಂದಿಗೆ ಯಾವುದೇ ನಿರ್ದಿಷ್ಟ ಮಾಹಿತಿ ಹಂಚಿಕೊಂಡಿಲ್ಲ ಎಂದು ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಕೆನಡಾ ಜತೆಗಿನ ರಾಜತಾಂತ್ರಿಕ ವಿವಾದದ ಬಗ್ಗೆ ಭಾರತ ತನ್ನ ಮಿತ್ರರಾಷ್ಟ್ರಗಳಿಗೆ ಅಭಿಪ್ರಾಯಗಳನ್ನು ತಿಳಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಗ್ಚಿ, ‘ಭಾರತವು ತನ್ನ ನಿಲುವನ್ನು ತಿಳಿಸಿದೆ’ ಎಂದರು.
ಪ್ರತಿಕ್ರಿಯೆ ನೀಡದ ಟ್ರುಡೊ:
ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಸಂಸತ್ತಿನಲ್ಲಿ ತಾವು ಮಾಡಿದ್ದ ಆರೋಪಗಳನ್ನು ಭಾರತ ನಿರಾಕರಿಸಿರುವ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೊ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಖಾಲಿಸ್ತಾನ ನಾಯಕ ಹರ್ದೀಪ್ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿರುವುದಾಗಿ ಟ್ರುಡೊ ಆರೋಪಿಸಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನದಲ್ಲಿ ಭಾಗವಹಿಸುವ ಸಲುವಾಗಿ ಕೆನಡಾ ಪ್ರಧಾನಿ ಇಲ್ಲಿಗೆ ಬಂದಿದ್ದರು. ವಿಶ್ವಸಂಸ್ಥೆ ಆವರಣದೊಳಗೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮತ್ತು ಸಂದರ್ಭಗಳಲ್ಲಿ ಪಿಟಿಐ ಸುದ್ದಿ ಸಂಸ್ಥೆಯ ಪ್ರತಿನಿಧಿ ಅವರನ್ನು ಮಾತನಾಡಿಸಲು ಯತ್ನಿಸಿದರು.
ಆರೋಪವನ್ನು ಭಾರತ ನಿರಾಕರಿಸಿರುವ ಕುರಿತು ಕೇಳಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮುಂದೆ ಸಾಗಿದರು. ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರು.
ಕೆನಡಾ ತಿರಸ್ಕಾರ
ಕೆನಡಾಕ್ಕೆ ಪ್ರಯಾಣ ಕೈಗೊಳ್ಳಬಯಸುವವರಿಗೆ ಸುರಕ್ಷತೆ ದೃಷ್ಟಿಯಿಂದ ಭಾರತ ನೀಡಿದ್ದ ಮುನ್ನೆಚ್ಚರಿಕೆಗಳನ್ನು ಅಲ್ಲಿನ ಸರ್ಕಾರ ತಿರಸ್ಕರಿಸಿದ್ದು ಸಾವಧಾನದಿಂದ ಇರುವಂತೆ ಕರೆ ನೀಡಿದೆ. ವಿಶ್ವದಲ್ಲಿಯೇ ಕೆನಡಾ ಅತ್ಯಂತ ಸುರಕ್ಷಿತ ಸ್ಥಳ ಎಂದು ಹೇಳಿಕೊಂಡಿದೆ.