ಶನಿವಾರ ಬೆಳಗ್ಗೆ ಮಹುವಾ ಮೊಯಿತ್ರಾ ಅವರ ಕೋಲ್ಕತ್ತ ನಿವಾಸ, ಕಚೇರಿ ಸೇರಿದಂತೆ ದೆಹಲಿ ಕಚೇರಿಗಳ ಮೇಲೆಯೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ, ಆರು ತಿಂಗಳೊಳಗೆ ವರದಿ ನೀಡಬೇಕು ಹಾಗೂ ತನಿಖೆಯ ಪ್ರಗತಿ ಬಗ್ಗೆ ಮಾಸಿಕ ವರದಿಯನ್ನು ನೀಡಬೇಕು ಎಂದು ಲೋಕಪಾಲ್ ಸಿಬಿಐಗೆ ನಿರ್ದೇಶಿಸಿದೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮಾತನಾಡಲು ಮಹುವಾ ಮೊಯಿತ್ರಾ ಅವರು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿಯಿಂದ ಹಣ ಹಾಗೂ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ್ದ ಸದನದ ನೀತಿ ಸಮಿತಿ, ಮಹುವಾ ಅವರನ್ನು ಉಚ್ಚಾಟಿಸಬೇಕು ಎಂದು ವರದಿ ನೀಡಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.
ಈ ಲೋಕಸಭೆ ಚುನಾವಣೆಗೆ ಕೃಷ್ಣನಗರ ಕ್ಷೇತ್ರದಿಂದ ಮತ್ತೆ ಮಹುವಾ ಅವರಿಗೆ ಟಿಎಂಸಿ ಟಿಕೆಟ್ ನೀಡಿದೆ.