ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್: ನಾಗಾರ್ಜುನ ಸಾಗರ ಜಲಾಶಯಕ್ಕೆ ಸಿಆರ್‌ಪಿಎಫ್‌ ನಿಯೋಜನೆ

Published 2 ಡಿಸೆಂಬರ್ 2023, 16:23 IST
Last Updated 2 ಡಿಸೆಂಬರ್ 2023, 16:23 IST
ಅಕ್ಷರ ಗಾತ್ರ

ಹೈದರಾಬಾದ್: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನಾಗಾರ್ಜುನ ಸಾಗರ ಜಲಾಶಯದ ವಿಚಾರವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಧ್ಯೆ ಪ್ರಕ್ಷುಬ್ಧ ವಾತಾವರಣ ಉಂಟಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಜಲಾಶಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯನ್ನು (ಸಿಆರ್‌ಪಿಎಫ್‌) ಶನಿವಾರ ನಿಯೋಜಿಸಿದೆ.

ಜಲಾಶಯದ ಒಟ್ಟು 26 ಗೇಟ್‌ಗಳಲ್ಲಿ 13 ಗೇಟ್‌ಗಳನ್ನು ಗುರುವಾರ ವಶಕ್ಕೆ ತೆಗೆದುಕೊಂಡ ಆಂಧ್ರಪ್ರದೇಶ ಪೊಲೀಸರು, ಜಲಾಶಯದ ಸುತ್ತ ಭಾರಿ ಪೊಲೀಸ್‌ ಭದ್ರತೆ ಒದಗಿಸಿದ್ದರು. ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಬೇಕು ಎಂದು ತೆಲಂಗಾಣ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಕೇಂದ್ರ ಜಲಶಕ್ತಿ  ಕಾರ್ಯದರ್ಶಿ ದೇವಶ್ರೀ ಮುಖರ್ಜಿ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಅಧಿಕಾರಿಗಳ ಜೊತೆ ಶನಿವಾರ ವರ್ಚುವಲ್‌ ಸಭೆ ನಡೆಸಿದರು. ಕೇಂದ್ರ ಗೃಹ ಕಾರ್ಯದರ್ಶಿ ಅವರು ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿದರು. 

13 ಗೇಟ್‌ಗಳನ್ನು ವಶಕ್ಕೆ ತೆಗೆದುಕೊಂಡ ಬಳಿಕ ಆಂಧ್ರಪ್ರದೇಶವು ಜಲಾಶಯದ ಬಲಭಾಗದ ನಾಲೆಗೆ ನೀರು ಹರಿಯುವಂತೆ ಮಾಡಿದೆ. ಈ ಬಳಿಕವೂ 5 ಟಿಎಂಸಿ ಹೆಚ್ಚುವರಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ರಾಜ್ಯಕ್ಕೆ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದೆ. 

ಆಂಧ್ರ‍ಪ್ರದೇಶದ ಮನವಿ ಕುರಿತು ಕೃಷ್ಣಾ ನದಿ ನೀರು ನಿರ್ವಹಣಾ ಮಂಡಳಿಯು (ಕೆಆರ್‌ಎಂಬಿ) ಸೋಮವಾರ ನಿರ್ಧಾರ ತೆಗೆದುಕೊಳ್ಳುವವರಗೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಜಲಶಕ್ತಿ ಕಾರ್ಯದರ್ಶಿ ಆಂಧ್ರಪ್ರದೇಶಕ್ಕೆ ಸೂಚಿಸಿದ್ದಾರೆ. ಡಿಸೆಂಬರ್‌ 6ರಂದು ದೆಹಲಿಯಲ್ಲಿ ಸಭೆ ನಡೆಸುವುದಾಗಿಯೂ ತಿಳಿಸಿದ್ದಾರೆ ಎಂದು ಆಂಧ್ರಪ್ರದೇಶದ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. 

ಕೆಆರ್‌ಎಂಬಿಯ ಮುಖ್ಯಕಚೇರಿಯನ್ನು ಹೈದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ವರ್ಗಾಯಿಸುವಂತೆ ಕೆಆರ್‌ಎಂಬಿ ಮುಖ್ಯಸ್ಥರಿಗೆ ನಿರ್ದೇಶನ ನೀಡುವಂತೆ ಜಲಶಕ್ತಿ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಕಾರ್ಯದರ್ಶಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT