ಅಮರಾವತಿ: ಚುನಾವಣೆಯಲ್ಲಿ ಆಂಧ್ರಪ್ರದೇಶ ರಾಜ್ಯಕ್ಕೆ ತೆಲುಗು ದೇಶಂ (ಟಿಡಿಪಿ) ಪಕ್ಷದ ಗೆಲುವು ಮುಖ್ಯ ಎಂದು ಪ್ರತಿಪಾದಿಸಿರುವ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ರಾಜ್ಯದ ಜನರು ಪಕ್ಷಕ್ಕೆ ದೇಣಿಗೆ ನೀಡಬೇಕೆಂದು ಕೋರಿದ್ದು ಈ ನಿಟ್ಟಿನಲ್ಲಿ ವೆಬ್ಸೈಟ್ ಆರಂಭಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅವರು, ‘ರಾಜ್ಯದ ಬೆಳವಣಿಗೆಗಾಗಿ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ್ತು ತೆಲುಗು ದೇಶಂಗಾಗಿ ನಾವು ವೆಬ್ಸೈಟ್ ಹೊರತಂದಿದ್ದು, ಇದರ ಮೂಲಕ ನೀವು ಸುಲಭವಾಗಿ ದೇಣಿಗೆ ನೀಡಬಹುದಾಗಿದೆ’ ಎಂದು ತಿಳಿಸಿದ್ದಾರೆ.
ನಾಯ್ಡು ಅವರು ಪಕ್ಷಕ್ಕೆ ₹99,999 ದೇಣಿಗೆ ನೀಡಿದ್ದಾರೆ. ರಾಜ್ಯವನ್ನು ಪುನರ್ ನಿರ್ಮಿಸಲು ಶ್ರಮಿಸುತ್ತಿರುವ ಪಕ್ಷಕ್ಕೆ ಇದು ಬಲ ನೀಡುತ್ತದೆ ಎಂದು ಅವರು ಹೇಳಿದ್ದಾರೆ.