ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಹಿಂಸಾಚಾರ: ಭಾರತಕ್ಕೆ ನೆರವು ನೀಡಲು ಅಮೆರಿಕ ಸಿದ್ಧ ಎಂದ ಎರಿಕ್‌ ಗಾರ್ಸೆಟ್ಟಿ

Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ‘ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಭಾರತದ ಆಂತರಿಕ ವಿಚಾರ. ಆದರೆ, ನೆರವು ಕೇಳಿದರೆ ನೀಡಲು ಅಮೆರಿಕ ಸಿದ್ಧವಿದೆ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಅವರು ಗುರುವಾರ ಕೋಲ್ಕತ್ತದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಹಿಂಸಾಚಾರದ ಕುರಿತು ಬೇಸರ ವ್ಯಕ್ತಪಡಿಸಿದ ಅವರು, ‘ಹಿಂಸಾಚಾರದಲ್ಲಿ ಸಾವಿಗೀಡಾಗುತ್ತಿರುವ ಮಕ್ಕಳು ಮತ್ತು ಇತರರ ಕುರಿತು ಕಾಳಜಿ ಹೊಂದಲು ಭಾರತೀಯರೇ ಆಗಬೇಕೆಂದಿಲ್ಲ. ಈಶಾನ್ಯ ರಾಜ್ಯಗಳು ಸಾಕಷ್ಟು ಪ್ರಗತಿ ಕಾಣುತ್ತಿವೆ. ಮಣಿಪುರಕ್ಕೆ ಸಂಬಂಧಿಸಿದಂತೆ ನೆರವು ಕೇಳಿದರೆ ನೆರವು ನೀಡಲು ನಾವು ಸಿದ್ಧರಿದ್ದೇವೆ. ಇದು ಭಾರತದ ಆಂತರಿಕ ವಿಚಾರ ಎಂದು ನಮಗೂ ತಿಳಿದಿದೆ’ ಎಂದಿದ್ದಾರೆ.

‘ಶಾಂತಿ ನೆಲೆಸಿದರೆ ಮಾತ್ರ ಉಭಯ ದೇಶಗಳ ನಡುವೆ ಇನ್ನೂ ಹೆಚ್ಚಿನ ಸಹಭಾಗಿತ್ವ, ಯೋಜನೆಗಳು, ಬಂಡವಾಳ ಹೂಡಿಕೆ ಸಾಧ್ಯ’ ಎಂದರು.

ಗಾರ್ಸೆಟ್ಟಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅವರು, ‘ವಿದೇಶಗಳ ರಾಯಭಾರಿಗಳು ಭಾರತದ ಆಂತರಿಕ ವಿಚಾರಗಳ ಕುರಿತು ಹೇಳಿಕೆ ನೀಡಬಹುದಾ ಎಂಬ ಕುರಿತು ನನಗೆ ಖಚಿತತೆ ಇಲ್ಲ. ಅವರ ಹೇಳಿಕೆಯನ್ನು ಪರಿಶೀಲಿಸದೇ ಈ ಕುರಿತು ಮಾತನಾಡುವುದಿಲ್ಲ’ ಎಂದಿದ್ದಾರೆ. 

ಕಾಂಗ್ರೆಸ್‌ ವಿರೋಧ: ಎರಿಕ್‌ ಗಾರ್ಸೆಟ್ಟಿ ಅವರ ಹೇಳಿಕೆಗೆ ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. 

‘ಭಾರತದ ಅಮೆರಿಕ ರಾಯಭಾರಿಯೊಬ್ಬರು ದೇಶದ ಆಂತರಿಕ ವಿಚಾರವಾಗಿ ಈ ರೀತಿಯ ಹೇಳಿಕೆ ನೀಡಿದ್ದನ್ನು ನಾನು ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ನೋಡಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಅಮೆರಿಕ ಮತ್ತು ಭಾರತದ ನಡುವಿನ ಜಟಿಲ ಮತ್ತು ಹಿಂಸಾತ್ಮಕ ದ್ವಿಪಕ್ಷೀಯ ಸಂಬಂಧದ ಕುರಿತು  ರಾಯಭಾರಿಯಾಗಿ ಹೊಸದಾಗಿ ನೇಮಕವಾಗಿರುವ ಎರಿಕ್‌ ಗಾರ್ಸೆಟ್ಟಿ ಅವರಿಗೆ ಅರಿವಿರುವ ಬಗ್ಗೆ ನನಗೆ ಸಂದೇಹವಿದೆ’.

ಜೊತೆಗೆ, ನಮ್ಮ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರ ಹಿಂದೆ ಒಳ್ಳೆಯ ಉದ್ದೇಶವಿದೆಯೊ ಅಥವಾ ದುರುದ್ದೇಶವಿದೆಯೊ ಎಂಬ ಕುರಿತು ತಿಳಿದುಕೊಳ್ಳುವಲ್ಲಿ ಭಾರತೀಯರಿಗಿರುವ ಸೂಕ್ಷ್ಮತೆ ಬಗ್ಗೆ ಅವರಿಗೆ ಅರಿವಿರುವ ಕುರಿತು ಸಂದೇಹವಿದೆ’ ಎಂದಿದ್ದಾರೆ.

‘ತಾಯ್ನಾಡಿನಲ್ಲೇ ಜನರು ನಿರಾಶ್ರಿತರಾಗಿದ್ದಾರೆ’

‘ತಮ್ಮ ಸ್ವಂತ ದೇಶದಲ್ಲೇ ನಿರಾಶ್ರಿತರಾಗುವಂತೆ ಮಣಿಪುರ ಜನರ ಮೇಲೆ ಒತ್ತಡ ತರಲಾಗಿದೆ’ ಎಂದು ಸಿಪಿಐ ಸಂಸದ ಬಿನಾಯ್ ವಿಶ್ವನಾಥ್‌ ಅವರು ಆರೋಪಿಸಿದ್ದಾರೆ.

ಎರಡು ದಿನಗಳ ಭೇಟಿಗಾಗಿ ಮಣಿಪುರಕ್ಕೆ ಗುರುವಾರ ಬಂದಿರುವ ಸಿಪಿಎಂ ಮತ್ತು ಸಿಪಿಐ ಸಂಸದರ ನಿಯೋಗದಲ್ಲಿ ಬಿನಾಯ್‌ ಕೂಡಾ ಒಬ್ಬರು. ‘ಆಡಳಿತಗಾರರ ಒಡೆದು ಆಳುವ ನೀತಿ ಕುರಿತು ಮಣಿಪುರದ ಜನರು ನಮ್ಮ ನಿಯೋಗಕ್ಕೆ ಮಾಹಿತಿ ನೀಡಿದ್ದಾರೆ. ಸಾಮಾನ್ಯ ಜನರಿಗೆ ತಿಳುವಳಿಕೆ ಇದೆ. ಆದರೆ ಬಿಜೆಪಿ ಅವರನ್ನು ವಂಚಿಸಿದೆ. ಈ ವಂಚನೆಗೆ ಬಿಜೆಪಿ ಬೆಲೆ ತೆರುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT