ಜೈಪುರ: ಬಿಪೊರ್ ಜಾಯ್ ಚಂಡಮಾರುತದ ಪರಿಣಾಮದಿಂದಾಗಿ ರಾಜಸ್ಥಾನದ ಬಾರ್ಮರ್, ಸಿರೋಹಿ, ಉದಯಪುರ, ಜಲೋರ್, ಜೋಧ್ಪುರ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆ ಬಿರುಗಾಳಿ ಸಮೇತ ಭಾರಿ ಮಳೆಯಾಗಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ, ಜಲೋರ್, ಸಿರೋಹಿ ಮತ್ತು ಬರ್ಮೇರ್ನಲ್ಲಿ ಗರಿಷ್ಠ ಮಳೆ ದಾಖಲಾಗಿದೆ.ಬರ್ಮೇರ್, ಜಲೋರ್, ಸಿರೋಹಿ ಮತ್ತು ಪಾಲಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಶನಿವಾರ 'ಆರೆಂಜ್' ಅಲರ್ಟ್‘ ಘೋಷಿಸಿದೆ.
ಬರ್ಮೇರ್ ಮೂಲಕ ಹೋಗುವ ಹದಿನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದೆ. ಉದಯಪುರದಿಂದ ದೆಹಲಿ ಮತ್ತು ಮುಂಬೈಗೆ ಹೊರಡಬೇಕಿದ್ದ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಾರ್ಮರ್ನ 5 ಗ್ರಾಮಗಳಲ್ಲಿರುವ 5,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬಿಪೊರ್ ಜಾಯ್ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತವರಣವಿದ್ದು, ಸಿರೋಹಿಯ ಸೇರಿ ಹಲವು ಸ್ಥಳಗಳಲ್ಲಿ ಗಂಟೆಗೆ 62 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.
ಬಿಪೊರ್ ಜಾಯ್ ಚಂಡಮಾರುತ ಶುಕ್ರವಾರ ರಾತ್ರಿ ರಾಜಸ್ಥಾನ ತಲುಪಿದೆ. ಇದರ ಪರಿಣಾಮವಾಗಿ ಭಾನುವಾರದವರೆಗೂ ರಾಜ್ಯದಲ್ಲಿ ಮಳೆಯ ಪರಿಸ್ಥಿತಿ ಮುಂದುವರೆಯಲಿದೆ. ಬಸ್ ಹಾಗೂ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಹಲವೆಡೆ ವಿದ್ಯುತ್ ಕಡಿತಗೊಂಡಿದೆ.
ಜೋಧ್ಪುರದಲ್ಲಿ ಭಾರಿ ಮಳೆಯ ಕಾರಣದಿಂದ ಆರೆಂಜ್ ಅಲರ್ಟ್ ಶನಿವಾರವೂ ಮುಂದುವರಿದಿದೆ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ತರಬೇತಿ ಸಂಸ್ಥೆಗಳು, ಜಿಮ್ಗಳು, ಪ್ರವಾಸಿ ಸ್ಥಳಗಳು ಮತ್ತು ಬೇಸಿಗೆ ಶಿಬಿರಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಸೂಚನೆ ನೀಡಿದ್ದಾರೆ.
ಜೋಧ್ಪುರನ ಹಲವು ಭಾಗಗಳಲ್ಲಿ ಶನಿವಾರ 100 ಮಿ.ಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.