ನವದೆಹಲಿ : ರಾಷ್ಟ್ರೀಯ ಭದ್ರತೆ ಕುರಿತ ಸಮಗ್ರ ದೃಷ್ಟಿಕೋನ, ದೇಶೀಯ ರಕ್ಷಣಾ ಪರಿಕರಗಳ ತಯಾರಿಕೆಗೆ ಉತ್ತೇಜನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಇದೇ 19 ಮತ್ತು 20ರಂದು ನಡೆಯಲಿರುವ ಮಹತ್ವದ ‘ಚಿಂತನ ಶಿಬಿರ’ದಲ್ಲಿ ಚರ್ಚೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯೋಧರು ಮತ್ತು ನಿವೃತ್ತ ಯೋಧರು ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಸಚಿವಾಲಯದ ವಿವಿಧ ವಿಭಾಗಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ವಿಷಯ ತಜ್ಞರು ಸಚಿವಾಲಯದ ಅಧಿಕಾರಿಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.
ಸೈಬರ್ ಭದ್ರತೆಯ ಸವಾಲುಗಳು, ರಾಷ್ಟ್ರೀಯ ಮಾಹಿತಿ ಕುರಿತ ಭದ್ರತಾ ನೀತಿ ಮತ್ತು ಮಾರ್ಗಸೂಚಿಗಳು ಹಾಗೂ ಸೈನಿಕ ಶಾಲೆಗಳು ಶಿಕ್ಷಣ ವ್ಯವಸ್ಥೆ ಕುರಿತೂ ವಿಸ್ತೃತ ಸಂವಾದ ನಡೆಯಲಿದೆ.
ರಕ್ಷಣಾ ಸಲಕರಣೆಗಳ ಉತ್ಪಾದನೆ ಮತ್ತು ರಫ್ತು ಹೆಚ್ಚಳ, ‘ಆತ್ಮನಿರ್ಭರ ಭಾರತ’ದ ಅನುಷ್ಠಾನ, ಕೈಗಾರಿಕಾ ಪರಿಸರ ವ್ಯವಸ್ಥೆ ಮತ್ತು ಕೌಶಲಯುತ ಕಾರ್ಯಪಡೆ, ಉನ್ನತ ಮಟ್ಟದ ಕಾರ್ಯ ನಿರ್ವಹಣೆ ಕ್ಷೇತ್ರ ಮತ್ತು ಗುಣಮಟ್ಟ ಸುಧಾರಣೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದೆ.