ತಿರುಚ್ಚಿ(ತಮಿಳುನಾಡು): 136 ಪ್ರಯಾಣಿಕರನ್ನು ಹೊತ್ತು ಇಲ್ಲಿನ ವಿಮಾನ ನಿಲ್ದಾಣದಿಂದ ದುಬೈನತ್ತ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನವೊಂದು ವಿಮಾನ ಸಂಚಾರ ನಿಯಂತ್ರಣ(ಎಟಿಸಿ) ಕೇಂದ್ರದ ಕಾಂಪೌಂಡ್ಗೆ ಡಿಕ್ಕಿ ಹೊಡೆದು ತಕ್ಷಣ, ಮುಂಬೈನತ್ತ ಪ್ರಯಾಣಿಸಿರುವ ಪ್ರಸಂಗ ಗುರುವಾರ ತಡರಾತ್ರಿ ನಡೆದಿದೆ.
ಘಟನೆ ಸಂಬಂಧ ತನಿಖೆ ಆರಂಭವಾಗಿದ್ದು, ಮುಗಿಯುವವರೆಗೂ ಪೈಲಟ್ ಹಾಗೂ ಸಹ ಪೈಲಟ್ ಅನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಈ ಸಂಬಂಧ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ ಏರ್ ಇಂಡಿಯಾ ಮಾಹಿತಿ ನೀಡಿದೆ.
ಪ್ರಕರಣ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿಮಾನಯಾನ ಸಂಸ್ಥೆ, ‘ಎಲ್ಲಾ ಪ್ರಯಾಣಿಕರು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ. ಅಲ್ಲಿಂದ ದುಬೈಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದಿದೆ.
ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದತಮಿಳುನಾಡು ಪ್ರವಾಸೋದ್ಯಮ ಸಚಿವ ವೆಲ್ಲಮಂಡಿ ಎನ್. ನಟರಾಜು, ‘ವಿಮಾನವು ಎಲ್ಲಾ ಪ್ರಯಾಣಿಕರೊಂದಿಗೆ ಮುಂಬೈ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪರಿಸ್ಥಿತಿಯನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.