ಚಂಡೀಗಢ: ನಾಲ್ಕು ವರ್ಷದ ಬಾಲಕ ಸೇರಿದಂತೆ ಆರು ಜನರ ಕೊಲೆ ಪ್ರಕರಣದ ಅಪರಾಧಿ, ಮಾಜಿ ಕುಸ್ತಿ ಕೋಚ್ಗೆ ಇಲ್ಲಿನ ರೋಹ್ತಕ್ನ ಜಿಲ್ಲಾ ನ್ಯಾಯಾಲಯ ಮರಣದಂಡನೆ ಹಾಗೂ ₹ 1.26 ಲಕ್ಷ ದಂಡವನ್ನು ವಿಧಿಸಿದೆ.
ಮಾಜಿ ಕುಸ್ತಿ ಕೋಚ್ ಸುಖ್ವಿಂದರ್ ಶಿಕ್ಷೆಗೊಳಗಾದವರು. ಐಪಿಸಿಯ ವಿವಿಧ ಸೆಕ್ಷನ್ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಸಾಕ್ಷ್ಯ ನಾಶಪಡಿಸಿದ ಆರೋಪ ಸಾಬೀತಾದ ಕಾರಣ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಗನ್ ಗೀತ್ ಕೌರ್ ಅವರು ಸಜೆ ವಿಧಿಸಿ ಆದೇಶಿಸಿದರು.
ಸೋನೆಪತ್ ಜಿಲ್ಲೆಯ ಬರೌಡ ಗ್ರಾಮದ ಸುಖ್ವಿಂದರ್, ಫೆಬ್ರುವರಿ 12, 2021ರಲ್ಲಿ ಪತ್ನಿ ಸಾಕ್ಷಿ ಮಲ್ಲಿಕ್, ಮನೋಜ್ ಮಲ್ಲಿಕ್, ಪುತ್ರ ಸರ್ತಾಜ್, ಕೋಚ್ಗಳಾಗಿದ್ದ ಸತೀಶ್ ಕುಮಾರ್, ಪ್ರದೀಪ್ ಮಲ್ಲಿಕ್ ಮತ್ತು ಕುಸ್ತಿಪಟು ಪೂಜಾ ಅವರನ್ನು ಹತ್ಯೆ ಮಾಡಿದ್ದರು.
ಘಟನೆಯಲ್ಲಿ ಅಮರಜೀತ್ ಎಂಬವವರು ಗಾಯಗೊಂಡಿದ್ದರು. ರೋಹ್ತಕ್ನ ಖಾಸಗಿ ಕಾಲೇಜಿಗೆ ಹೊಂದಿಕೊಂಡಿದ್ದ ಕುಸ್ತಿ ಆವರಣದಲ್ಲಿ ಕೃತ್ಯ ನಡೆದಿತ್ತು. ದೂರುಗಳ ಹಿನ್ನೆಲೆಯಲ್ಲಿ ಸೇವೆಯಿಂದ ಕೈಬಿಟ್ಟಿದ್ದರಿಂದ ಕುಪಿತರಾಗಿ ಕೃತ್ಯ ಎಸಗಿದ್ದರು ಎಂದು ಪೊಲೀಸರು ಬಳಿಕ ತಿಳಿಸಿದ್ದರು.
ಪಂಜಾಬ್– ಹರಿಯಾಣ ಹೈಕೋರ್ಟ್ ದೃಢೀಕರಿಸುವವರೆಗೂ, ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದೂ ನ್ಯಾಯಾಧೀಶರು ಆದೇಶಿಸಿದರು.