ಲಖನೌ: ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಲ್ಲಿ ಒಬ್ಬರಾದ 27 ವರ್ಷದ ಅಖಿಲೇಶ್ ಸಿಂಗ್ ಅವರ ಮನೆಯಲ್ಲಿ ದೀಪಾವಳಿ ಸಂಭ್ರಮ ಇರಲಿಲ್ಲ. ಆದರೆ ಮಂಗಳವಾರ ಅವರ ಮನೆಯಲ್ಲಿ ಹಬ್ಬದ ವಾತಾವರಣ ಕಂಡಿತು.
‘ಈಗ ನಾವು ದೀಪಾವಳಿ ಆಚರಿಸುತ್ತೇವೆ. ನನ್ನ ಮಗ 17 ದಿನಗಳ ಬಳಿಕ ಸುರಂಗದಿಂದ ಸುರಕ್ಷಿತವಾಗಿ ಹೊರಗೆ ಬಂದಿದ್ದಾನೆ’ ಎಂದು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಗರ್ವಾಸ್ಪುರ ಗ್ರಾಮದ ನಿವಾಸಿ ಅಂಜು ದೇವಿ ಆನಂದಭಾಷ್ಪ ಸುರಿಸುತ್ತಲೇ ಹೇಳಿದರು.
ಸುರಂಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದ ಕಂಪನಿಯಲ್ಲಿ ಸೂಪರ್ವೈಸರ್ ಆಗಿದ್ದ ಅಖಿಲೇಶ್ ಅವರ ಕುಟುಂಬದ ಸದಸ್ಯರು ಮಂಗಳವಾರ ಬೆಳಿಗ್ಗೆಯಿಂದಲೇ ಟಿ.ವಿ ಮುಂದೆ ಕುಳಿತು, ರಕ್ಷಣಾ ಕಾರ್ಯಾಚರಣೆಯ ಪ್ರಗತಿಯ ಮಾಹಿತಿ ಪಡೆಯುತ್ತಿದ್ದರು.
‘ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ಕಾರ್ಮಿಕರನ್ನು ಸುರಂಗದಿಂದ ಹೊರತರಲು ಹಗಲಿರುಳೆನ್ನದೆ ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಅಖಿಲೇಶ್ ಅವರ ತಂದೆ ರಮೇಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು. ಸಂಬಂಧಿಕರು ಮತ್ತು ಗ್ರಾಮದ ಇತರ ನಿವಾಸಿಗಳು ರಮೇಶ್ ಅವರ ಮನೆಯ ಬಳಿ ನೆರೆದಿದ್ದರು.
’ಅಖಿಲೇಶ್ ಸುರಂಗದಲ್ಲಿ ಸಿಲುಕಿದ ವಿಷಯವನ್ನು ಅವರ ಗರ್ಭಿಣಿ ಪತ್ನಿ ಮತ್ತು 80 ವರ್ಷದ ಅಜ್ಜನಿಗೆ ಆರಂಭದಲ್ಲಿ ತಿಳಿಸಿರಲಿಲ್ಲ. ಘಟನೆ ನಡೆದು ಕೆಲ ದಿನಗಳ ಬಳಿಕವಷ್ಟೇ ಅವರಿಗೆ ವಿವರ ತಿಳಿಸಿದೆವು’ ಎಂದು ರಮೇಶ್ ಹೇಳಿದರು.