ಮುಂಬೈ: ಮುಂಬೈ ಮತ್ತು ಕರ್ನಾಟಕದಲ್ಲಿ ಹಲವಾರು ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿರುವ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಥಾಣೆ, ಕಲ್ಯಾಣ್, ಉಲ್ಲಾಸನಗರ ಮತ್ತು ಮುಂಬೈ ಬಳಿಯ ಡೊಂಬಿವ್ಲಿಯಲ್ಲಿ ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಪೂಜಾರಿಯನ್ನು ಫಿಲಿಪೀನ್ಸ್ನಲ್ಲಿ ಬಂಧಿಸಿ ಮತ್ತು ಹಸ್ತಾಂತರಿಸಿದ ನಂತರ ಮಂಗಳವಾರ ತಡರಾತ್ರಿ ಭಾರತಕ್ಕೆ ಕರೆತರಲಾಯಿತು.
ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಗುಪ್ತಚರ ದಳ (ಐಬಿ) ಮತ್ತು ಸಿಬಿಐ ಅಧಿಕಾರಿಗಳು ಆತನನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದ ನಂತರ, ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮುಂಬೈ ಅಪರಾಧ ವಿಭಾಗದ ತಂಡ ಈಗಾಗಲೇ ದೆಹಲಿಯಲ್ಲಿದೆ. ಹಲವಾರು ಸುಲಿಗೆ ಪ್ರಕರಣಗಳ ನಂತರ ಮುಂಬೈ ಮತ್ತು ಥಾಣೆ ಪೊಲೀಸರು ಕ್ರಮವಾಗಿ 2017 ಮತ್ತು 2018 ರಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು.
ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಪೂಜಾರಿಯನ್ನು ಅಕ್ಟೋಬರ್ನಲ್ಲಿ ಫಿಲಿಪ್ಪಿನ್ಸ್ ಇಂಟರ್ಪೋಲ್ ಪೊಲೀಸರು ಬಂಧಿಸಿದ್ದರು. ಥಾಣೆಯೊಂದರಲ್ಲೇ 23 ಸುಲಿಗೆ ಪ್ರಕರಣಗಳು ಪೂಜಾರಿ ವಿರುದ್ಧ ದಾಖಲಾಗಿವೆ.
ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದ ಸುರೇಶ್, 2007ರಲ್ಲಿ ಆತನಿಂದ ಬೇರ್ಪಟ್ಟು ವಿದೇಶಕ್ಕೆ ಪರಾರಿಯಾಗಿದ್ದ. ಭೂಗತ ಪಾತಕಿಗಳಾದ ಚೋಟಾ ರಾಜನ್ ಮತ್ತು ರವಿ ಪೂಜಾರಿ ಸಹಚರನಾಗಿದ್ದ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿ ಅವರಿಂದ ಬೇರ್ಪಟ್ಟು ತನ್ನದೇ ಆದ ಗ್ಯಾಂಗ್ ಅನ್ನು ಕಟ್ಟಿಕೊಂಡಿದ್ದ.