ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟರ ವೈಭವೀಕರಣ ಗಂಭೀರವಾದುದು: ಪ್ರಧಾನಿ ನರೇಂದ್ರ

ಸದನದ ವರ್ಚಸ್ಸು ಕಾಪಾಡುವಲ್ಲಿ ಚುನಾಯಿತ ಪ್ರತಿನಿಧಿಗಳ ವರ್ತನೆ ನಿರ್ಣಾಯಕ: ಮೋದಿ
Published 27 ಜನವರಿ 2024, 15:53 IST
Last Updated 27 ಜನವರಿ 2024, 15:53 IST
ಅಕ್ಷರ ಗಾತ್ರ

ಮುಂಬೈ: ಕಾಯ್ದೆ ರೂಪಿಸುವಾಗ ಮತ್ತು ಭ್ರಷ್ಟಾಚಾರದ ವಿಚಾರದಲ್ಲಿ ಶಿಷ್ಟಾಚಾರ ಪಾಲನೆ ಮುಖ್ಯ. ಆದರೆ, ಶಿಕ್ಷೆಗೆ ಗುರಿಯಾಗಿರುವ ಭ್ರಷ್ಟರನ್ನು ವೈಭವೀಕರಿಸುತ್ತಿರುವುದು ಗಂಭೀರ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ವಿಧಾನಸಭೆಯಲ್ಲಿ ನಡೆದ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ವರ್ಚುವಲ್‌ ಆಗಿ ಅವರು ಮಾತನಾಡಿದರು.

‘ಈ ಹಿಂದೆ, ಶಾಸನಸಭೆ ಸದಸ್ಯರೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಸಂದರ್ಭಗಳಲ್ಲಿ ಅವರನ್ನು ಸಾರ್ವಜನಿಕ ಜೀವನದಿಂದ ದೂರ ಇಡಲಾಗುತ್ತಿತ್ತು. ಆದರೆ, ಈಗ ಶಿಕ್ಷೆಗೆ ಗುರಿಯಾಗಿರುವ ಭ್ರಷ್ಟರನ್ನು ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತಿದ್ದೇವೆ. ಇದು ಕಾರ್ಯಾಂಗ, ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಧಕ್ಕೆ ತರುವಂಥದು’ ಎಂದು ಮೋದಿ ಹೇಳಿದರು.

‘ಸದನಗಳಲ್ಲಿ ಚುನಾಯಿತ ಪ್ರತಿನಿಧಿಗಳ ನಡವಳಿಕೆ ಹಾಗೂ ನಡೆಯುವ ಚರ್ಚೆಗಳು ಫಲಪ್ರದವಾಗುವಂತಿರಬೇಕು. ಹೀಗಾಗಿ, ಈ ಸಮಾವೇಶದಲ್ಲಿ ಹೊರಹೊಮ್ಮುವ ಸಲಹೆ–ಸೂಚನೆಗಳು ಶಾಸನಸಭೆಗಳ ಅಧಿವೇಶನದ ಉತ್ಪಾದಕತೆ ಹೆಚ್ಚುವಂತೆ ಮಾಡಲಿ’ ಎಂದು ಆಶಿಸಿದರು.

‘ಸದನದ ವರ್ಚಸ್ಸಿನ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳ ವರ್ತನೆ ನಿರ್ಣಾಯಕವಾಗಲಿದೆ’ ಎಂದೂ ಅವರು ಹೇಳಿದರು.

‘ತಮ್ಮ ಪಕ್ಷದ ಸದಸ್ಯರು ತೋರುವ ಆಕ್ಷೇಪಾರ್ಹ ವರ್ತನೆಯನ್ನು ಖಂಡಿಸುವ ಬದಲು ಪಕ್ಷಗಳು ಅವರನ್ನೇ ಬೆಂಬಲಿಸುವುದು ವಿಷಾದಕರ. ಇಂತಹ ನಡೆಗಳು ವಿಧಾನಸಭೆಗಳಿಗೆ ಅಥವಾ ಸಂಸತ್‌ಗೆ ತಕ್ಕುದಲ್ಲ’ ಎಂದು ಹೇಳಿದರು.

‘ಅನಗತ್ಯ ಕಾಯ್ದೆಗಳು ಹಾಗೂ ಜನಸಾಮಾನ್ಯರ ಮೇಲೆ ಅವುಗಳಿಂದಾಗುತ್ತಿರುವ ಪರಿಣಾಮಗಳ ಬಗ್ಗೆ ಪೀಠಾಸೀನಾಧಿಕಾರಿಗಳು ಗಮನ ಹರಿಸಬೇಕು. ಅನಗತ್ಯ ಕಾಯ್ದೆಗಳನ್ನು ರದ್ದು ಮಾಡಿದಲ್ಲಿ ಅದರಿಂದಾಗುವ ಪರಿಣಾಮ ಅಗಾಧ’ ಎಂದರು.

Quote - ನೀತಿ ನಿರೂಪಣೆ ಪ್ರಕ್ರಿಯೆಯಲ್ಲಿ ಮಹಿಳೆಯರು ಮತ್ತು ಯುವಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು. ಅವರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT