ನವದೆಹಲಿ: ಗುರುಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಏಳು ವರ್ಷದ ಬಾಲಕನನ್ನು ಹತ್ಯೆಗೈದ ಪ್ರಕರಣದ ಬಾಲಾರೋಪಿಯ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಕೆಯಾಗದ ಕಾರಣ ಜಾಮೀನು ನೀಡಬೇಕೆಂದು ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಆರ್.ಎಫ್ ನಾರಿಮನ್ ಮತ್ತು ಇಂಧು ಮಲ್ಹೋತ್ರಾ ಅವರಿದ್ದ ಪೀಠ ವಜಾಗೊಳಿಸಿದೆ.
‘ಇದು ಸೆಕ್ಷನ್ 302ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣವಾದ ಕಾರಣ ಆರೋಪಪಟ್ಟಿ ಸಲ್ಲಿಸಲು 90 ದಿನಗಳ ಅವಕಾಶವಿದೆ’ ಎಂದು ನ್ಯಾಯಪೀಠ ಹೇಳಿದೆ.
ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ 16ವರ್ಷದ ಬಾಲಕನ ಜಾಮೀನು ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಹಿಂದೆ ವಜಾ ಮಾಡಿತ್ತು. ಕಳೆದ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಹತ್ಯೆ ನಡೆದಿತ್ತು.