ಅಮರಾವತಿ: ವಿಷಾನಿಲ ಸೋರಿಕೆ ದುರಂತಕ್ಕೆ ಕಾರಣವಾಗಿದ್ದ ವಿಶಾಖಪಟ್ಟಣದ ಎಲ್.ಜಿ.ಪಾಲಿಮರ್ಸ್ ಘಟಕ ಜಪ್ತಿ ಮಾಡಲು ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿದೆ. ಸರ್ಕಾರ ನೇಮಿಸಿರುವ ಸಮಿತಿ ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಪ್ರವೇಶ ನಿರ್ಬಂಧಿಸಿದೆ.
ಮೇ 22ರಂದು ನೀಡಿರುವ ಆದೇಶದಲ್ಲಿ ಕೋರ್ಟ್ ಸಮ್ಮತಿಯಿಲ್ಲದೆ ಕಂಪನಿ ನಿರ್ದೇಶಕರು ದೇಶ ಬಿಟ್ಟು ಹೋಗಬಾರದು. ಅಲ್ಲದೆ, ತನ್ನ ಅನುಮತಿ ಇಲ್ಲದೇ ನಿರ್ದೇಶಕರ ಪಾಸ್ಪೋರ್ಟ್ಗಳನ್ನು ಹಿಂದಿರುಗಿಸಬಾರದು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.
ದುರಂತದಲ್ಲಿ ನೊಂದವರಿಗೆ ನ್ಯಾಯ ಒದಗಿಸಬೇಕು ಹಾಗೂ ಘಟಕವನ್ನು ಸ್ಥಳಾಂತರಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಕರಣದ ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿರುವ ಪೀಠ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೇ 26ರೊಳಗೆ ತಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಬೇಕು ಎಂದೂ ಸೂಚಿಸಿದೆ.