ಅಮರಾವತಿ: ಅಮರಾವತಿ ಒಳ ವರ್ತುಲ ರಸ್ತೆಯ ಹಗರಣಕ್ಕೆ ಸಂಬಂಧಿಸಿದಂತೆ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಆಂಧ್ರ ಪ್ರದೇಶ ಹೈಕೋರ್ಟ್ ನವೆಂಬರ್ 7ಕ್ಕೆ ಮುಂದೂಡಿದೆ.
ನಾಯ್ಡು ಅವರ ಅಧಿಕಾರದ ಅವಧಿಯಲ್ಲಿ (2014–2019) ಕೆಲವರಿಗೆ ಅನುಕೂಲ ಮಾಡಿಕೊಡಲು ಒಳ ವರ್ತುಲ ರಸ್ತೆಗೆ ಸಂಬಂಧಿಸಿದಂತೆ ಅಮರಾವತಿ ನಗರದ ಮಾಸ್ಟರ್ ಪ್ಲಾನ್ ಅನ್ನು ತಿರುಚಲಾಗಿದೆ ಎಂಬ ಆರೋಪದ ಕುರಿತ ಪ್ರಕರಣ ಇದಾಗಿದೆ.
ಆಂಧ್ರ ಪ್ರದೇಶದ ಸಿಐಡಿ ಪರ ವಕೀಲ ಅಡ್ವೊಕೇಟ್ ಜನರಲ್ ಎಸ್. ಶ್ರೀರಾಮ್ ಮತ್ತು ನಾಯ್ಡು ಪರ ವಕೀಲ ಸಿದ್ಧಾರ್ಥ ಲೂತ್ರಾ ಹೈಕೋರ್ಟ್ನಲ್ಲಿ ಹಾಜರಿದ್ದರು.
ಕೌಶಲ ಅಭಿವೃದ್ಧಿ ನಿಗಮದ ₹300 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಾಯ್ಡು ಅವರು, ಸದ್ಯ ಆಂಧ್ರ ಪ್ರದೇಶದ ರಾಜಮಹೇಂದ್ರವರಂ ಕಾರಾಗೃಹದಲ್ಲಿ ನ್ಯಾಯಾಂಗ ವಶದಲ್ಲಿದ್ದಾರೆ.