ನವದೆಹಲಿ: ಪಾಕಿಸ್ತಾನ ಉಗ್ರವಾದವನ್ನು ನಿಲ್ಲಿಸಿದರೆ ಭಾರತ ಸೇನೆಯೂ ‘ನೀರಜ್ ಚೋಪ್ರಾ ರೀತಿ’ ಪ್ರತಿಕ್ರಿಯಿಸಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ಹೇಳಿದರು.
ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಅಥ್ಲೀಟ್ಗಳನ್ನು ಸೇನೆಯ ವತಿಯಿಂದ ಸನ್ಮಾನಿಸಿದ ಸಂದರ್ಭ ರಾವತ್ ಈ ಹೇಳಿಕೆ ನೀಡಿದರು.
ಏಷ್ಯನ್ ಕ್ರೀಡಾಕೂಟದ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಅಥ್ಲೀಟ್ ನೀರಜ್ ಚೋಪ್ರಾ ಅವರು ಕಂಚು ಗೆದ್ದ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಅವರ ಕೈ ಕುಲುಕಿ ಕ್ರೀಡಾ ಮನೋಭಾವ ತೋರಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಭಾರತ–ಪಾಕಿಸ್ತಾನ ಗಡಿಯಲ್ಲಿ ‘ಕ್ರೀಡಾಮನೋಭಾವ’ ತೋರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವತ್, ‘ಭಯೋತ್ಪಾದನೆ ನಿಲ್ಲಿಸಲು ಪಾಕ್ ಮೊದಲ ಹೆಜ್ಜೆ ಇರಿಸಬೇಕು’ ಎಂದರು.
‘ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017ರಲ್ಲಿ ಕಾಶ್ಮೀರದ ಪರಿಸ್ಥಿತಿ ಸುಧಾರಿಸಿದ್ದು, 2018ರಲ್ಲಿ ಮತ್ತಷ್ಟು ಸುಧಾರಣೆ ಕಾಣುತ್ತಿದೆ’ ಎಂದು ರಾವತ್ ಹೇಳಿದರು.