ನವದೆಹಲಿ: ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕೇರಳದ ಉತ್ತರ ಭಾಗದಲ್ಲಿ ಏ.28ರಂದು ಧಾರಾಕಾರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದ ಈಶಾನ್ಯ, ದಕ್ಷಿಣ ಮತ್ತು ಕೇಂದ್ರ ಭಾಗದ ವಿವಿಧೆಡೆ ಏಪ್ರಿಲ್ 26 ರಿಂದ 30ರವರೆಗೂ ಮಳೆಯಾಗುವ ಸಂಭವವಿದೆ ಎಂದೂ ಇಲಾಖೆಯು ತಿಳಿಸಿದೆ.
ಅಲ್ಲದೆ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳಗಾಡು, ತೆಲಂಗಾಣ, ಪುದುಚೇರಿ, ತಮಿಳುನಾಡು ಒಳಗೊಂಡಂತೆ ವಿವಿಧೆಡೆ ಏ. 29ರಂದು ಗುಡುಗು, ಸಿಡಿಲು ಸಮೇತ ಧಾರಾಕಾರ ಮಳೆ ಆಗಬಹುದು. ಗಾಳಿಯು ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಇಲಾಖೆಯು ತಿಳಿಸಿದೆ.
ಗುಡುಗು, ಸಿಡಿಲು ಮತ್ತು ಬೀಸು ಗಾಳಿಯೂ ಕೂಡ ತೆಲಂಗಾಣ, ಕೇರಳ ಮತ್ತು ಮಾಹೆ ಭಾಗದಲ್ಲಿ ಏಪ್ರಿಲ್ 26ರ ನಂತರ ಕಾಣಿಸಿಕೊಳ್ಳಬಹುದು. ಕರ್ನಾಟಕದ ಒಳನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರದ ಕೇಂದ್ರಭಾಗ, ಮರಾಠಾವಾಡ, ರಾಯಲಸೀಮಾ, ಪುದುಚೇರಿ ಭಾಗದ ಕೆಲವೆಡೆ ಸೋಮವಾರ ಗುಡುಗು, ಮಿಂಚು ಕಾಣಿಸಿಕೊಳ್ಳಲಿದೆ.
ಏಪ್ರಿಲ್ 30ರಂದು ದಕ್ಷಿಣ ಕರ್ನಾಟಕದ ಒಳನಾಡು ಮತ್ತು ಕೇರಳದ ಉತ್ತರ ಭಾಗದ ಕೆಲವೆಡೆ ಭಾರಿ ಮಳೆಯಾಗುವ ಸಂಭವವಿದೆ. ಉಳಿದಂತೆ, ಗುಜರಾತ್ ಮತ್ತು ಒಡಿಶಾದ ಕಡಲತೀರ ಭಾಗದಲ್ಲಿ ಒಣಹವೆ ಮುಂದುವರಿಯಲಿದೆ. ಏಪ್ರಿಲ್ 27ರಂದು ಉತ್ತರಾಖಂಡ, ಅಸ್ಸಾಂ, ಮೇಘಾಲಯ, ಕೇಂದ್ರ ಮಹಾರಾಷ್ಟ್ರ, ತೆಲಂಗಾಣ, ಕೇರಳ ಮತ್ತು ಮಾಹೆ ಭಾಗದಲ್ಲಿ ಭಾರಿ ಮಳೆಯಾಗಬಹುದು ಎಂದು ಮಾಹಿತಿ ನೀಡಿದೆ.