ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ವಿಶಾಲ ಮನಸ್ಥಿತಿ ಸರ್ಕಾರ ರಚನೆಗೆ ಭಾರತ, ಆಸ್ಟ್ರೇಲಿಯಾ ಆಗ್ರಹ

Last Updated 12 ಸೆಪ್ಟೆಂಬರ್ 2021, 7:28 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನದಲ್ಲಿ ವಿಶಾಲ ಮನಸ್ಥಿತಿ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಸರ್ಕಾರ ಬರಬೇಕು ಎಂದು ಬಯಸಿರುವ ಭಾರತ ಮತ್ತು ಆಸ್ಟ್ರೇಲಿಯಾ, ಈ ಮೂಲಕ ತಾಲಿಬಾನ್ ಆಡಳಿತಕ್ಕೆ ಯಾವುದೇ ಮಾನ್ಯತೆ ನೀಡಲು ಇಷ್ಟವಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿವೆ.

ಭಾರತ- ಆಸ್ಟ್ರೇಲಿಯಾ 2+2 ಸಚಿವಾಲಯದ ಚರ್ಚೆಯ ನಂತರ ಭಾನುವಾರ ಬೆಳಿಗ್ಗೆ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಒತ್ತಿ ಹೇಳಿವೆ. ಅವರ ಹಕ್ಕುಗಳನ್ನು ಹಿಂಸೆಯ ಮೂಲಕ ಹತ್ತಿಕ್ಕುವುದಕ್ಕೆ ಎರಡೂ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

‘ವಿದೇಶಿ ಪ್ರಜೆಗಳು ಮತ್ತು ದೇಶ ತೊರೆಯಲು ಬಯಸುವ ಅಫ್ಗನ್‌ ಪ್ರಜೆಗಳಿಗೆ ಸುರಕ್ಷಿತ ಮಾರ್ಗವನ್ನು ತಾಲಿಬಾನ್‌ ಸಚಿವರು ಖಚಿತಪಡಿಸಬೇಕು. ಅಲ್ಲದೆ ಅಧಿಕಾರ ಹಿಡಿಯುವವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಪ್ರಕಾರ, ಭಯೋತ್ಪಾದನಾ ನಿಗ್ರಹ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರಬೇಕು’ ಎಂದು ಹೇಳಿವೆ.

‘ಭಯೋತ್ಪಾದಕ ದಾಳಿಗೆ ತಮ್ಮ ಪ್ರದೇಶ ಬಳಕೆಯಾಗದಂತೆ ಎಲ್ಲ ದೇಶಗಳು ಬದ್ಧತೆ ತೋರಬೇಕು. ಅಲ್ಲದೆ ಅಂತಹ ದಾಳಿಯ ಅಪರಾಧಿಗಳಿಗೆ ಶೀಘ್ರವೇ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಉಭಯ ದೇಶಗಳು ಆಗ್ರಹಿಸಿವೆ.

ಮುಂಬೈ, ಪಠಾಣ್‌ಕೋಟ್‌, ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಆಸ್ಟ್ರೇಲಿಯಾ ಮತ್ತೆ ಖಂಡಿಸಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನವದೆಹಲಿಗೆ ತನ್ನ ಬೆಂಬಲ ಇರುತ್ತದೆ ಎಂದು ಆಸ್ಟ್ರೇಲಿಯಾ ಪುನರುಚ್ಚರಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಶನಿವಾರ ಆಸ್ಟ್ರೇಲಿಯಾದ ಸಹವರ್ತಿಗಳಾದ ಮರಿಸ್ ಪೇನ್ ಮತ್ತು ಪೀಟರ್ ದಟ್ಟನ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT