ಅಮರಾವತಿ (ಆಂಧ್ರಪದೇಶ): ನ್ಯಾವಿಗೇಷನ್ (ಪಥದರ್ಶಕ) ‘ಎನ್ವಿಎಸ್–01’ ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ–ಎಫ್12 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದ ಇಸ್ರೊ ವಿಜ್ಞಾನಿಗಳನ್ನು ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಅಭಿನಂದಿಸಿದ್ದಾರೆ.
ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದರು. ‘ಇಸ್ರೋ ಉಡಾವಣೆ ಮಾಡಿದ ಎರಡನೇ ತಲೆಮಾರಿನ ಉಪಗ್ರಹಗಳಲ್ಲಿ ಎನ್ವಿಎಸ್–01 ಮೊದಲನೆಯದಾಗಿದ್ದು, ನ್ಯಾವಿಗೇಷನಲ್ (ಪಥದರ್ಶಕ) ಸೇವೆಗಳ ನಿರಂತರತೆಯನ್ನು ಖಚಿತಪಡಿಸುತ್ತದೆ ಮತ್ತು ಈ ಯಶಸ್ವಿ ಮಿಷನ್ ಇಸ್ರೋಗೆ ಮತ್ತೊಂದು ಹೆಮ್ಮೆಯ ಗರಿಯನ್ನು ಮುಡಿಗೇರಿಸಿದೆ’ ಎಂದು ರಾಜ್ಯಪಾಲರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ, ಮುಂದಿನ ಪೀಳಿಗೆಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ತಂಡಕ್ಕೆ ಅಭಿನಂದಿಸಿದರು. ಭಾರತದ ನ್ಯಾವಿಗೇಷನ್ ಸಾಮರ್ಥ್ಯಗಳನ್ನು ಉತ್ತೇಜಿಸುವ ಮೂಲಕ ಇಸ್ರೋ ತನ್ನ ಮುಂದಿನ ಪ್ರಯತ್ನಗಳಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಎರಡನೇ ತಲೆಮಾರಿನ ಉಪಗ್ರಹ ಸರಣಿಯ ಮೊದಲನೆಯ ಎನ್ವಿಎಸ್–01 ಅನ್ನು ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಮ್ಮ ಬಾಹ್ಯಾಕಾಶ ಕಾರ್ಯಕ್ರಮವು ಭವ್ಯವಾಗಿ ಮುನ್ನಡೆಯುತ್ತಿದೆ ಮತ್ತು ಪ್ರಪಂಚದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ನಮ್ಮ ವಿಜ್ಞಾನಿಗಳ ಬಗ್ಗೆ ರಾಷ್ಟ್ರಕ್ಕೆ ಹೆಮ್ಮೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
Congratulations to team ISRO for successfully placing NVS-01, the first of the second-generation satellite series, into geosynchronous transfer orbit.
— Basavaraj S Bommai (@BSBommai) May 29, 2023
Our space programme is surging ahead majestically & making its mark in the world. The nation is proud of our scientists. pic.twitter.com/23x2Tohhcn
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.