ನವದೆಹಲಿ:ಪೌರತ್ವ (ತಿದ್ದುಪಡಿ) ಮಸೂದೆಯನ್ನು ಖಂಡಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಭಾರತ ಪ್ರವಾಸ ರದ್ದಾಗುವ ಸಾಧ್ಯತೆ ಇದೆ.
ಪೂರ್ವನಿಗದಿಯಂತೆ ಅಬೆ ಅವರು ಭಾನುವಾರ ಭಾರತಕ್ಕೆ ಭೇಟಿ ನೀಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಬೆ ನಡುವಣ ಮಾತುಕತೆಯನ್ನು ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಿಗಡಿಪಡಿಸಲಾಗಿದೆ. ಆದರೆ, ಅಸ್ಸಾಂನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವುದರಿಂದ ಭೇಟಿ ರದ್ದಾಗುವ ಸಾಧ್ಯತೆ ಇದೆ ಎಂದು ಜಪಾನ್ನ ‘ಜೀಜಿ ಪ್ರೆಸ್’ ಹೇಳಿಕೆ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಭೇಟಿ ರದ್ದಾಗದಂತೆ ನೋಡಿಕೊಳ್ಳಲು ಭಾರತ ಮತ್ತು ಜಪಾನ್ ಸರ್ಕಾರದ ಅಧಿಕಾರಿಗಳು ಕೊನೆಯ ಪ್ರಯತ್ನ ನಡೆಸುತ್ತಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ. ಆದರೆ, ಸದ್ಯ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದುವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಶಿಂಜೊ ಅಬೆ ಅವರು ಡಿಸೆಂಬರ್ 15ರಿಂದ 17ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು ಮೋದಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ರವೀಶ್ ಕುಮಾರ್ ಗುರುವಾರ ಹೇಳಿದ್ದರು. ಆದರೆ, ಮಾತುಕತೆಯ ಸ್ಥಳ ಯಾವುದು ಎಂಬುದನ್ನು ಸರ್ಕಾರ ಘೋಷಿಸಿರಲಿಲ್ಲ. ಆದಾಗ್ಯೂ, ಗುವಾಹಟಿಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿತ್ತು.
ಗುವಾಹಟಿಯ ಲಾಲುಂಗ್ಗಾಂವ್ನಲ್ಲಿ ಗುರುವಾರ ಕಲ್ಲು ತೂರಾಟ ನಡೆಸಿದ್ದ ಪ್ರತಿಭಟನಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದರು.
ಬಾಂಗ್ಲಾ ಸಚಿವರ ಭಾರತ ಭೇಟಿಯೂ ರದ್ದು:ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳುನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಅವರೂ ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾರೆ.