ಬಸ್ತಿ (ಉತ್ತರ ಪ್ರದೇಶ): ಆಯ್ದ ಮನೆಗಳಲ್ಲಿ ದರೋಡೆ ಮಾಡುವುದಾಗಿ ಪೋಸ್ಟರ್ ಹಾಕಿದ್ದ ಖದೀಮರು, ಎರಡು ದಿನಗಳ ಹಿಂದೆ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಮತ್ತು ನಗದು ದೋಚಿದ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.
ಓಡ್ವಾರ ರಗಡಪುರ ಗ್ರಾಮದ ನಿವಾಸಿ ನಿರ್ಮಲಾ ದೇವಿ ಅವರ ಮನೆಯಲ್ಲಿ ದರೋಡೆ ನಡೆದಿದ್ದು, ಭಾನುವಾರ ತಡರಾತ್ರಿ ಆಕೆಯ ಮನೆಯ ಬಾಗಿಲು ಬಡಿದ ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ₹20 ಸಾವಿರ ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 21ರಂದು ರುಧೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶುನಪುರವಾ ಗ್ರಾಮದ ಎರಡು ಸ್ಥಳಗಳಲ್ಲಿ ಪೋಸ್ಟರ್ಗಳು ಕಂಡುಬಂದಿದ್ದು, ಹತ್ತು ದಿನಗಳಲ್ಲಿ ಕೆಲವು ಆಯ್ದ ಮನೆಗಳಲ್ಲಿ ಲೂಟಿ ಮಾಡಲಾಗುವುದು ಎಂದು ಪೋಸ್ಟರ್ನಲ್ಲಿ ಬರೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ರೀತಿಯ ಪೋಸ್ಟರ್ಗಳು ಡಿಸೆಂಬರ್ 23ರಂದು ವಾಲ್ಟರ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡ್ರಿ ಗ್ರಾಮದಲ್ಲಿ ಮತ್ತು ಡಿಸೆಂಬರ್ 27ರಂದು ಮುಂಡೆರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಛಾಪಿಯಾ ಲುತಾವಾನ್ ಗ್ರಾಮದಲ್ಲಿ ಕಂಡುಬಂದಿವೆ ಎಂದೂ ಅವರು ಹೇಳಿದ್ದಾರೆ.
ಪೋಸ್ಟರ್ಗಳ ಬಗ್ಗೆ ಜನರಲ್ಲಿ ಆತಂಕ ಮೂಡಿದ್ದು, ಪೊಲೀಸರ ಗಮನಕ್ಕೆ ತರಲಾಗಿತ್ತು. ಡಿಸೆಂಬರ್ 30ರಂದು ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿ ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ದರೋಡೆ ನಡೆದ ಕುರಿತು ಮಹಿಳೆ ಮತ್ತು ಆತನ ಮಗ ದೂರು ನೀಡಿದ್ದು, ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 457 (ರಾತ್ರಿ ವೇಳೆ ಅತಿಕ್ರಮಣ) ಮತ್ತು 380 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಬಸ್ತಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಕೃಷ್ಣ ಚೌಧರಿ ತಿಳಿಸಿದ್ದಾರೆ.