ಚಂಡೀಗಢ: ಉತ್ತರಾಖಂಡದ ಜೋಶಿಮಠದಲ್ಲಿ ಎರಡು ವರ್ಷದ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಯ ಮೇಲ್ಪದರ ಸ್ಥಳಾಂತರಗೊಳ್ಳಲಿದೆ ಎಂದು ತನ್ನ ಸಂಶೋಧಕರು 2021ರಲ್ಲೇ ಭವಿಷ್ಯ ನುಡಿದಿದ್ದರು ಎಂದು ಐಐಟಿ ರೋಪರ್ ಸೋಮವಾರ ಹೇಳಿದೆ.
‘ಐಐಟಿ ರೋಪರ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ರೀತ್ ಕಮಲ್ ತಿವಾರಿ ಅವರ ನೇತೃತ್ವದ ಸಂಶೋಧಕರ ತಂಡವು 2021ರಲ್ಲಿ ಜೋಶಿಮಠದಲ್ಲಿ ಪ್ರವಾಹ ಸನ್ನಿವೇಶ ತಲೆದೋರಿದ್ದಾಗ ಹಿಮಗಡ್ಡೆಗಳ ಸ್ಥಳಾಂತರ ಯಾವ ರೀತಿ ಆಗಲಿದೆ ಎಂಬುದರ ಕುರಿತು ಅಧ್ಯಯನ ನಡೆಸಿತ್ತು’ ಎಂದಿದೆ.
ಈ ಅಧ್ಯಯನದ ವೇಳೆ ಡಾ. ತಿವಾರಿ ಮತ್ತು ಆಗ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ ಹಾಗೂ ಪ್ರಸ್ತುತ ಐಐಟಿ ಪಟ್ನಾದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅಕ್ಷರ್ ತ್ರಿಪಾಠಿ ಅವರು ಜೋಶಿಮಠದಲ್ಲಿ ಭೂಮಿಯ ಮೇಲ್ಪದರ ಸ್ಥಳಾಂತರವಾಗುವ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದೂ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.