ಕಾನ್ಪುರ: ಪ್ರವಾದಿ ಬಗ್ಗೆ ಹೇಳಿಕೆ ವಿರೋಧಿಸಿ ಕಾನ್ಪುರದಲ್ಲಿ ಜೂನ್ 3ರಂದು ನಡೆದಿದ್ದ ಹಿಂಸಾ ಚಾರದ ಮುಖ್ಯ ಆರೋಪಿ ಜಾಫರ್ ಹಯಾತ್ ಹಶ್ಮಿಯ ಆಪ್ತನಿಗೆ ಸೇರಿದ ಬಹುಮಹಡಿ ಕಟ್ಟಡವನ್ನು ಕಾನ್ಪುರ ಅಭಿವೃದ್ಧಿ ಪ್ರಾಧಿಕಾರ ಧ್ವಂಸಗೊಳಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಹಶ್ಮಿ ಸಂಬಂಧಿ ಮೊಹಮ್ಮದ್ ಇಶ್ತಿಯಾಕ್ ಅವರು ಸ್ವರೂಪ್ ನಗರದಲ್ಲಿ ಹೊಸದಾಗಿ ನಿರ್ಮಿಸಿದ್ದ ಕಟ್ಟಡವನ್ನು ಕೆಡವಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಹಶ್ಮಿ ಬಂಡವಾಳ ಹೂಡಿರುವ ಮಾಹಿತಿ ಯಿದೆ. ಕಟ್ಟಡವನ್ನುಕಾನೂನು ಪ್ರಕಾ ರವೇ ಧ್ವಂಸಗೊಳಿಸಲಾಗಿದೆ ಎಂದು ಪೊಲೀಸ್ ಜಂಟಿ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.
ಹಶ್ಮಿ, ಜಾವೇದ್ ಅಹ್ಮದ್ ಖಾನ್, ಮೊಹಮ್ಮದ್ ರಾಹಿಲ್ ಮತ್ತು ಸುಫಿ ಯಾನ್ ಅವರನ್ನು ಶನಿವಾರ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಬಿಜೆಪಿ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದರ ಕುರಿತು ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ವಿರೋಧಿಸಿ ಕಾನ್ಪುರದಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿ, ಪೆಟ್ರೋಲ್ ಬಾಂಬ್ ಎಸೆದಿತ್ತು. ಈ ಗಲಭೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿ 40 ಜನರು ಗಾಯಗೊಂಡಿದ್ದರು.
ನೂಪುರ್ಗೆ ಸಮನ್ಸ್ ಮುಂಬೈ: ಪ್ರವಾದಿ ಬಗ್ಗೆ ಹೇಳಿಕೆ ನೀಡಿದ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಶನಿವಾರ ಸಮನ್ಸ್ ನೀಡಿದ್ದು, ಇದೇ 25ರಂದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದ್ದಾರೆ.
*
ಜ್ಞಾನವಾಪಿಯಲ್ಲಿರುವುದು ಶಿವ. ಅದನ್ನು ಕಾರಂಜಿ ಎಂದಿದ್ದರು. ಹಿಂದೂ ದೇವರಿಗೆ ಅಪಮಾನವಾದರೆ, ನಾವು ಸತ್ಯವನ್ನು ಹೇಳಬೇಕಾಗುತ್ತದೆ. –ಪ್ರಜ್ಞಾ ಠಾಕೂರ್, ಬಿಜೆಪಿ ಸಂಸದೆ
ಪಶ್ಚಿಮ ಬಂಗಾಳದ ಹೌರಾದಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಕಟ್ಟಡವೊಂದಕ್ಕೆ ಹಚ್ಚಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು –ಪಿಟಿಐ ಚಿತ್ರ