ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಸಿಎಂ ‘ಸಿದ್ಧ’

Published 19 ಮೇ 2023, 0:30 IST
Last Updated 19 ಮೇ 2023, 0:30 IST
ಅಕ್ಷರ ಗಾತ್ರ

ನವದೆಹಲಿ: ಕರುನಾಡ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಮೂರು ದಿನಗಳ ಕಾಲ ನಡೆದ ಜಂಗೀಕುಸ್ತಿಯಲ್ಲಿ ಹಲವು ಪಟ್ಟುಗಳನ್ನು ಪ್ರಯೋಗಿಸಿದ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಕೈಮೇಲಾಗಿದೆ. ಹೈಕಮಾಂಡ್‌ ಒಲವು ಒಂದಿನಿತೂ ಕದಲದಂತೆ ನೋಡಿಕೊಂಡ ಅವರನ್ನು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಅರಸಿಕೊಂಡು ಬಂದಿದೆ.

ಫಲಿತಾಂಶ ಪ್ರಕಟಗೊಂಡ ದಿನದಿಂದಲೇ ಅತ್ತು ಕರೆದ, ಹೊಣೆ ವಹಿಸುವ ಸಂದರ್ಭದಲ್ಲಿ ನೀಡಿರುವ ವಾಗ್ದಾನದಂತೆ ಕೂಲಿ ಕೊಡುವ ಭರವಸೆ ನೆನಪಿಸಿದ, ವರಿಷ್ಠರನ್ನು ಬೆದರಿಸುವ ತಂತ್ರ ಪ್ರಯೋಗಿಸಿದ ಹಾಗೂ ಹಲವು ಭಾವನಾತ್ಮಕ ಬಾಣಗಳನ್ನು ಎಸೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಬೇಡಿಕೆ ಹಾಗೂ ಷರತ್ತುಗಳಿಗೆ ಭಾಗಶಃ ಮಣಿದ ಹೈಕಮಾಂಡ್‌, ಮುಂದಿನ ದಿನಗಳಲ್ಲಿ ಉಡುಗೊರೆ ನೀಡುವ ಭರವಸೆ ನೀಡಿ ಸಮಾಧಾನಪಡಿಸಿದೆ. ಮಧ್ಯರಾತ್ರಿಯ ಸಂಧಾನಕ್ಕೆ ಕೊನೆಗೂ ಮಣಿದ ರಾಜ್ಯ ಕಾಂಗ್ರೆಸ್‌ನ ಸಾರಥಿ ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ.

ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರಕ್ಕೂ ಸ್ಪಷ್ಟ ಭರವಸೆ ನೀಡದ ವರಿಷ್ಠರು, ‘ಒಗ್ಗಟ್ಟಿನಿಂದ ಕೆಲಸ ಮಾಡಿ ಮುಂಬರುವ ಚುನಾವಣೆಗಳು, ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬನ್ನಿ. ಮುಂದೆ ನೋಡೋಣ’ ಎಂಬ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಈಗಲೇ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರ ಹೆಣೆದರೆ ಆಡಳಿತ ಯಂತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಭಾವಿಸಿದ ಹೈಕಮಾಂಡ್‌, ಜಾಣ್ಮೆಯ ಹೆಜ್ಜೆ ಇಟ್ಟಿದೆ. 

‘ಕೈ’ಪಾಳಯಕ್ಕೆ ಸೇರಿದ ದಿನದಿಂದ ಎಲ್ಲ ರೀತಿಯ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯ ಅವರಿಗೆ ಈ ಸಲ ರಾಜ್ಯದ ಚುಕ್ಕಾಣಿ ನೀಡಲೇಬಾರದು’ ಎಂದು ಹಠ ಹಿಡಿದು ಕೂತಿದ್ದ ಶಿವಕುಮಾರ್‌ ಅವರನ್ನು ಸಮಾಧಾನಪಡಿಸಲು ಹೈಕಮಾಂಡ್‌ನ ನಾಯಕರು ಎಲ್ಲ ಬಗೆಯ ತಂತ್ರಗಳನ್ನು ಪ್ರಯೋಗಿಸಿದರು. ಒಂದು ಹಂತದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಮಾತಿಗೂ ಶಿವಕುಮಾರ್ ಸೊಪ್ಪು ಹಾಕಲಿಲ್ಲ. ಮೂರು ದಿನಗಳ ಕಾಲ ನಡೆಸಿದ ಮನವೊಲಿಕೆಗೂ ಅವರು ಬಗ್ಗಲಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ನಿರ್ದೇಶನದ ಮೇರೆಗೆ ಕೆ.ಸಿ.ವೇಣುಗೋಪಾಲ್‌ ಅವರು ಬುಧವಾರ ರಾತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ಶಿವಕುಮಾರ್ ಅವರೊಂದಿಗೆ ರಾತ್ರಿ 11ರಿಂದ ಸುಮಾರು ಮೂರು ಗಂಟೆ ಸಮಾಲೋಚಿಸಿದರು. ಅವರ ಎಲ್ಲ ಷರತ್ತುಗಳನ್ನು ಆಲಿಸಿದರು. ಹೈಕಮಾಂಡ್ ಮುಂದಿರುವ ಸೂತ್ರಗಳನ್ನು ಮುಂದಿಟ್ಟರು.

‘ನನಗೆ ಸೋನಿಯಾ ಅವರೇ ವಾಗ್ದಾನ ನೀಡಿದ್ದಾರೆ. ಅವರ ಜತೆಗೆ ಈಗ ಮಾತನಾಡಬೇಕು’ ಎಂದು ಶಿವಕುಮಾರ್‌ ಹೇಳಿಕೊಂಡರು. ಮಧ್ಯರಾತ್ರಿಯಲ್ಲಿ ಸೋನಿಯಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆಗೂ ವ್ಯವಸ್ಥೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳು, ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಅನಿವಾರ್ಯತೆಗಳ ಕುರಿತು ಈ ವೇಳೆ ಚರ್ಚೆಯಾಯಿತು. ಮುಂದಿನ ದಿನಗಳಲ್ಲಿ ‘ಕೂಲಿ’ ಕೊಡುವ ಖಚಿತ ಭರವಸೆಯೂ ರಾಷ್ಟ್ರೀಯ ನಾಯಕರಿಂದ ಸಿಕ್ಕಿತು. ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಎಲ್ಲ ಭರವಸೆಗಳನ್ನು ಈಡೇರಿಸಲು ಪಕ್ಷವು ಒಪ್ಪಿತು. ‘ಪಕ್ಷ ನಿಷ್ಠ’ ಶಿವಕುಮಾರ್ ಅವರು ನಡು ರಾತ್ರಿಯಲ್ಲಿ ವರಿಷ್ಠ ನಾಯಕರ ಮಾತಿಗೆ ಬೆಣ್ಣೆಯಂತೆ ಕರಗಿದರು. ನಾಲ್ಕು ಉಪಮುಖ್ಯಮಂತ್ರಿಯ ಹೈಕಮಾಂಡ್‌ನ ಸೂತ್ರಕ್ಕೆ ಶಿವಕುಮಾರ್ ಸುತಾರಂ ಒಪ್ಪಲಿಲ್ಲ. ನಾನೊಬ್ಬನೇ ಉಪಮುಖ್ಯಮಂತ್ರಿ ಇರಬೇಕು ಎಂದು ಕೊನೆಯ ಅಸ್ತ್ರ ಎಸೆದರು. ಇದಕ್ಕೆ ಹೈಕಮಾಂಡ್‌ ಸೈ ಎಂದಿತು. ಮುಖ್ಯಮಂತ್ರಿ ಗಾದಿಗಾಗಿ ನಾಲ್ಕು ದಿನಗಳಿಂದ ನಡೆದಿದ್ದ ಹಗ್ಗಜಗ್ಗಾಟಕ್ಕೆ ತೆರೆ ಬಿತ್ತು. 

ದೆಹಲಿಗೆ ಬಂದ ನಂತರ ಪರಸ್ಪರರ ಮುಖ ನೋಡದ, ಉತ್ತರ ಧ್ರುವ ದಕ್ಷಿಣ ಧ್ರುವದಂತಿದ್ದ ಇಬ್ಬರು ನಾಯಕರು ಗುರುವಾರ ಬೆಳಿಗ್ಗೆ ವೇಣುಗೋಪಾಲ್‌ ಮನೆಯಲ್ಲಿ ಉಪಾಹಾರ ಕೂಟಕ್ಕೆ ಹಸನ್ಮುಖರಾಗಿ ಹಾಜರಾದರು. ತಿಂಡಿ ತಿಂದು ಒಂದೇ ಕಾರಿನಲ್ಲಿ ಖರ್ಗೆ ಮನೆಗೆ ತೆರಳಿದರು. ಅಲ್ಲಿ ಖರ್ಗೆ ಅವರು ಇಬ್ಬರು ಕೈ ಎತ್ತಿ ಇಬ್ಬರಲ್ಲಿ ಒಗ್ಗಟ್ಟು ಇದೆ ಎಂಬುದನ್ನು ತೋರಿಸಲು ಪ್ರಯತ್ನಿಸಿದರು. ನಂತರ ವೇಣುಗೋಪಾಲ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.  

ಅಧಿಕಾರ ಹಂಚಿಕೆಯ ವರದಿಗಳನ್ನು ಸಿದ್ದರಾಮಯ್ಯ ತಳ್ಳಿ ಹಾಕಿದರು. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ನಿಮಗೆ ಯಾರು ಹೇಳಿದ್ದು. ಮಾಧ್ಯಮಗಳಲ್ಲಿ ಬರುವುದೆಲ್ಲವೂ ಸತ್ಯ ಎಂದು ಹೇಳಲಾಗದು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT