ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹಗರಣ: ಹಣ ವರ್ಗಾವಣೆಯಲ್ಲಿ ಕೆಸಿಆರ್ ಪುತ್ರಿ ಕವಿತಾ ಸೋದರಳಿಯನ ಪಾತ್ರ: ED

Published 23 ಮಾರ್ಚ್ 2024, 11:39 IST
Last Updated 23 ಮಾರ್ಚ್ 2024, 11:39 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣವು ದೆಹಲಿಗಿಂತ ತೆಲಂಗಾಣದಲ್ಲೇ ಜೋರಾಗಿ ಸದ್ದು ಮಾಡುತ್ತಿದೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಕುಟುಂಬವನ್ನು ಈ ಹಗರಣ ನಿಧಾನಕ್ಕೆ ಸುತ್ತುವರಿಯುತ್ತಿದೆ. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿರುವ ಕೆಸಿಆರ್ ಪುತ್ರಿ ಕೆ.ಕವಿತಾ ನಂತರ, ಈ ಪ್ರಕರಣದಲ್ಲಿ ಹಣ ವರ್ಗಾವಣೆಯ ಆರೋಪ ಅವರ ಸೋದರಳಿಯನ ಮೇಲೆ ಬೊಟ್ಟು ಮಾಡಿದೆ.

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕವಿತಾ ಅವರು ನೀಡಿರುವ ಹೇಳಿಕೆಗೆ ಅನುಗುಣವಾಗಿ ಅವರ ಸೋದರಳಿಯ ಮೇಕಾ ಶ್ರೀಶರಣ್ ಅವರಿಗೆ ಸೇರಿದ ಕಟ್ಟಡಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದಿದೆ.

ಕೆಸಿಆರ್ ಪುತ್ರಿ 46 ವರ್ಷದ ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾರ್ಚ್ 15ರಂದು ಬಂಧಿಸಿತ್ತು. ಇವರ ಬಂಧನ ಅವಧಿ ಮಾರ್ಚ್ 26ರವರೆಗೆ ನ್ಯಾಯಾಲಯ ವಿಸ್ತರಿಸಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕವಿತಾ, ‘ಇದೊಂದು ದುರುದ್ದೇಶದಿಂದ ಕೂಡಿದ ಸುಳ್ಳು ಪ್ರಕರಣ. ಅದರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲೇ ಇಷ್ಟು ಜನ ರಾಜಕಾರಣಿಗಳನ್ನು ಬಂಧಿಸಲಾಗಿದೆ. ಇಂಥ ಸಂದರ್ಭದಲ್ಲಿ ಚುನಾವಣಾ ಆಯೋಗವು ಮಧ್ಯಪ್ರವೇಶಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದ್ದಾರೆ. ‘ಜತೆಗೆ ಚುನಾವಣೆ ಸಂದರ್ಭದಲ್ಲೇ ರಾಜಕಾರಣಿಗಳ ಬಂಧನದ ಏಕಾಗುತ್ತಿದೆ ಎಂಬುದನ್ನು ಜನರೂ ಯೋಚಿಸಬೇಕು’ ಎಂದು ಮನವಿ ಮಾಡಿದ್ದಾರೆ.

ದೆಹಲಿ ಸರ್ಕಾರವು 2021–22ರಲ್ಲಿ ತರಲು ಉದ್ದೇಶಿಸಿದ್ದ ಅಬಕಾರಿ ನೀತಿ ನಿರೂಪಣೆಯಲ್ಲಿ ತಮಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ‘ಸೌತ್ ಗ್ರೂಪ್‌’ ₹100 ಕೋಟಿ ಕಿಕ್‌ಬ್ಯಾಕ್‌ ಅನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆ ನೀತಿಯನ್ನು ರದ್ದುಪಡಿಸಲಾಗಿದೆ.

ಕವಿತಾ ಅವರಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ನಿಂದ ಶರಣ್ ಅವರ ಮಾಹಿತಿ ಲಭ್ಯವಾಗಿದ್ದು, ಅವರನ್ನು ಎರಡು ಬಾರಿ ವಿಚಾರಣೆಗೆ ಕರೆಯಲಾಗಿದ್ದರೂ, ಅವರು ಹಾಜರಾಗಿಲ್ಲ ಎಂದಿದ್ದಾರೆ.

ಕವಿತಾ, ವೈಎಸ್‌ಆರ್‌ಸಿಪಿ ಸಂಸದ ಮಗುಂಟ ಶ್ರೀನಿವಾಸುಲು ಹಾಗೂ ಅವರ ಪುತ್ರ ರಾಘವ ಮಗುಂಟ ಮತ್ತು ಇಂಡೋ ಸ್ಪಿರಿಟನ್‌ ಪ್ರಮೋಟರ್ ಸಮೀರ್ ಮಹೇಂದ್ರು ಅವರನ್ನೊಳಗೊಂಡ ತಂಡವು ಈ ಹಣ ವರ್ಗಾವಣೆಯ ಹಿಂದಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಇದೇ ಪ್ರಕರಣದಲ್ಲಿ ಈಗಾಗಲೇ ಮಹೇಂದ್ರ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಶರಣ್ ಕೂಡಾ ಕವಿತಾ ಅವರ ಅತ್ಯಂತ ಹತ್ತಿರದ ಸಂಬಂಧಿಯಾಗಿದ್ದು, ಮಾರ್ಚ್ 15ರಂದು ಕವಿತಾ ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಸ್ಥಳದಲ್ಲಿದ್ದರು ಎಂದು ಇ.ಡಿ. ಹೇಳಿದೆ.

ಈ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಇನ್ನೂ ಹಲವರ ಬಂಧನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT