ನವದೆಹಲಿ: ಬಜೆಟ್ ಅಧಿವೇಶನದ ಆರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ಬಿಜೆಪಿಯ ಏಳು ಶಾಸಕರಿಗೆ ದೆಹಲಿ ಹೈಕೋರ್ಟ್ ವಿಧಾನಸಭೆಯ ಅಧ್ಯಕ್ಷರನ್ನು ಭೇಟಿಯಾಗುವಂತೆ ಸೂಚಿಸಿದೆ.
ಶಾಸಕರ ಪರ ವಕೀಲ ಜಯಂತ್ ಮೆಹ್ತಾ ಶಾಸಕರು ಕ್ಷಮೆ ಕೋರಿ ಎಲ್ಜಿ ವಿ.ಕೆ.ಸಕ್ಸೇನಾ ಅವರಿಗೆ ಪತ್ರ ಬರೆದಿದ್ದು, ಅವರು ಕ್ಷಮೆ ಅಂಗೀಕರಿಸಿರುವುದಾಗಿ ಹೈಕೋರ್ಟ್ಗೆ ತಿಳಿಸಿದ ನಂತರ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಈ ಸೂಚನೆ ನೀಡಿದರು.
‘ನಾವು ತಪ್ಪು ಮಾಡಿದ್ದೇವೆ ಎಂದು ಭಾವಿಸುವುದಿಲ್ಲವಾದರೂ, ಅದು ಕ್ಷಮಾಪಣಾ ಪತ್ರವಾಗಿತ್ತು’ ಎಂದು ಶಾಸಕರ ಪರ ವಕೀಲರು ಹೇಳಿದರು.
‘ಶಾಸಕರಾಗಿ ವಿಧಾನಸಭೆಯ ಅಧ್ಯಕ್ಷರನ್ನು ಭೇಟಿಯಾಗುವುದು ನಮಗೆ ಕಷ್ಟವೇನಲ್ಲ. ಆದರೆ, ನಮ್ಮ ಕಳವಳ ಮತ್ತು ನೋವು ಇರುವುದು ನಮ್ಮ ಮುಂದುವರೆದ ಅಮಾನತಿನ ಬಗ್ಗೆ’ ಎಂದು ಶಾಸಕರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಗುರುವಾರಕ್ಕೆ ಮುಂದೂಡಿತು.