ಚಂಡೀಗಡ: ‘ದೇಶದಲ್ಲಿ ಮಿಡತೆಗಳ ಹಾವಳಿ ಮುಂದುವರೆದಿದ್ದು, ಈಗ ಅವು ಹರಿಯಾಣ ಕಡೆ ಮುಖ ಮಾಡಿವೆ. ಸಿರ್ಸಾ, ಭಿವಾನಿ, ಚರ್ಕಿ ದಾದ್ರಿ ಮತ್ತು ಮಹೇಂದ್ರಗಡ ಜಿಲ್ಲೆಗಳಿಗೆ ಮಿಡತೆಗಳು ದಾಳಿ ಇಟ್ಟಿವೆ’ ಎಂದು ಕೃಷಿ ಸಚಿವ ಜೆ.ಪಿ ದಲಾಲ್ ಭಾನುವಾರ ತಿಳಿಸಿದರು.
‘ಶನಿವಾರ ರಾತ್ರಿ ವೇಳೆಗೆ ಮಿಡತೆಗಳು ದಾಳಿ ಇಟ್ಟಿವೆ. ಅಧಿಕಾರಿಗಳುಈ ಕುರಿತು ತಕ್ಷಣದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಮಿಡತೆಗಳನ್ನು ಓಡಿಸಲು ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.
‘ಅಗ್ನಿ ಶಾಮಕದಳಗಳ ವಾಹನಗಳಲ್ಲಿ ರಾಸಯನಿಕಗಳನ್ನು ತುಂಬಿಕೊಳ್ಳಲಾಗಿದೆ. ಕೀಟವನ್ನು ಕೊಲ್ಲಲು ಸ್ಪ್ರೇ ಗನ್ಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಸಿದ್ಧತೆಗಳ ಬಗ್ಗೆ ಅವರು ವಿವರಿಸಿದರು.
‘ಪಕ್ಕದ ಜಿಲ್ಲೆಗಳಿಗೆ ಮಿಡತೆಗಳು ಪ್ರವೇಶ ಪಡೆಯದಂತೆ ಎಚ್ಚರವಹಿಸುವಂತೆ ಹಾಗೂಮಿಡತೆಗಳ ದಾಳಿಯಿಂದ ಆದ ಬೆಳೆ ನಾಶದ ಕುರಿತು ಪ್ರಾರ್ಥಮಿಕ ವರದಿ ನೀಡುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದರು.
‘ಮಿಡತೆ ದಾಳಿಯಿಂದ ಆದ ಬೆಳೆ ನಾಶದ ಕುರಿತು ರೈತರು ಚಿಂತಿಸುವ ಅಗತ್ಯ ಇಲ್ಲ. ಬೆಳೆ ನಾಶಕ್ಕೆ ಪರಿಹಾರ ನೀಡಲಾಗುವುದು. ಜತೆಗೆ, ಮಿಡತೆಗಳನ್ನು ರಾಜ್ಯದಿಂದ ಓಡಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ’ ಎಂದು ಅವರು ರೈತರಿಗೆ ಭರವಸೆ ನೀಡಿದರು.